ಪುತ್ತೂರು: ಉಪ್ಪಿನಂಗಡಿ ಸಮೀಪದ ಕೊಯಿಲದಲ್ಲಿ ಮುಂದಿನ ಸೆಪ್ಟಂಬರ್ ತಿಂಗಳಿನಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶಾಸಕರು ಶುಕ್ರವಾರದಂದು ಬೆಂಗಳೂರಿನಲ್ಲಿ ಪಶು ಸಂಗೋಪನೆ ಇಲಾಖೆಯ ಪ್ರಮುಖ ರನ್ನು ಭೇಟಿಯಾಗಿದ್ದು, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಈಗಾಗಲೇ ಉಪ್ಪಿನಂಗಡಿಯ ಕೊಯಿಲದಲ್ಲಿ ನಿರ್ಮಾಣ ವಾಗಿರುವ ಕಟ್ಟಡಗಳು ಖಾಲಿ ಬಿದ್ದಿದ್ದು, ಇದೇ ಕಟ್ಟಡವನ್ನು ನವೀಕರಿಸಿ ಮೂಲ ಸೌಕರ್ಯಗಳಿಗಗಿ ಸರಕಾರ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಮುಂದಿನ ಸೆಪ್ಟೆಂಬರ್ ಒಳಗಾಗಿ ಕಾಲೇಜು ಪ್ರಾರಂಭವಾಗಬೇಕು ಎಂದು ಶಾಸಕರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಪಶುಸಂಗೋಪನ ಸಚಿವಾಲಯ, ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡಿದೆ.
ಪಶು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ಇರಬೇಕಾದ ಅಗತ್ಯ ಕ್ರಮಗಳನ್ನು ಕೊಯಿಲದಲ್ಲಿರುವ ವಿಶಾಲವಾದ ಜಾಗದಲ್ಲಿ ಮಾಡಿಕೊಳ್ಳುವುದರ ಜೊತೆಗೆ ಹೊರ ಗುತ್ತಿಗೆ ಆಧಾರದಲ್ಲಿ ಸ್ಥಳದಲ್ಲಿ ಹಸು, ಕುರಿ ಮತ್ತು ಹಂದಿ ಸಾಕಾಣಿಕೆಗೆ ಅವಕಾಶ ನೀಡುವಂತೆ ಶಾಸಕರು ಮನವಿ ಮಾಡಿದ್ದರು. ಇದಕ್ಕೆ ಇಲಾಖೆ ಸ್ಪಂದಿಸಿದ್ದು, ಹೊರ ಗುತ್ತಿಗೆ ಆಧಾರದಲ್ಲಿ ಹಸು, ಕುರಿ ಮತ್ತು ಹಂದಿ ಸಾಕಾಣಿಕೆಗೆ ಅವಕಾಶವನ್ನು ಕಲ್ಪಿಸಿದೆ ಎಂದು ತಿಳಿದು ಬಂದಿದೆ.