ಮಂಗಳೂರು: ಉಳ್ಳಾಲದಿಂದ ಯುವಕನೋರ್ವನನ್ನು ಅಪಹರಿಸಿ ತಂದು ಚಾರ್ಮಾಡಿ ಘಾಟ್ ನಲ್ಲಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಉಳ್ಳಾಲ ದರ್ಗಾ ಬಳಿಯ ಕಬೀರ್ (26) ಎಂಬ ಯುವಕ ಮೇ.25 ರ ರಾತ್ರಿ 9ರ ಸುಮಾರಿಗೆ ಕೋಟೆಪುರ ಸಮೀಪ ಸಹೋದರನನ್ನು ಬಿಟ್ಟು, ಉಳ್ಳಾಲ ದರ್ಗಾ ಬಳಿಯ ತನ್ನ ಮನೆಯತ್ತ ಹಿಂತಿರುಗುತ್ತಿದ್ದಾಗ ಆತನ ಬೈಕಿಗೆ ಅಬ್ಬಕ್ಕ ವೃತ್ತದ ಬಳಿ ಕಾರೊಂದು ಢಿಕ್ಕಿ ಹೊಡೆದಿದೆ.
ನೆಲಕ್ಕುರುಳಿದ ಕಬೀರ್ ನನ್ನು ಕಾರಿನಿಂದ ಇಳಿದ ತಂಡ ಹಿಡಿಯಲು ಯತ್ನಿಸಿದಾಗ, ಕಬೀರ್ ಓಡಲು ಯತ್ನಿಸಿದ್ದಾರೆ. ಆದರೆ ಅವರ ಕಾಲಿಗೆ ರಾಡ್ ಎಸೆದು ಓಡದಂತೆ ತಡೆದು, ತಲವಾರಿನ ಹಿಂಭಾಗದಿಂದ ತಲೆಯ ಹಿಂಭಾಗಕ್ಕೆ ಬಡಿದು ಬಳಿಕ ಕಾರೊಳಗಡೆ ಹಾಕಿ ಅಪಹರಿಸಿದ್ದಾರೆ.
ಕಾರಿನ ಒಳಗಡೆ ಇದ್ದ ಐವರ ತಂಡದಲ್ಲಿ ಇಬ್ಬರು ಡ್ರಾಗರ್ ಅನ್ನು ಕಬೀರ್ ಕುತ್ತಿಗೆಗೆ ಹಿಡಿದಿದ್ದರು. ದೂರದ ಚಾರ್ಮಾಡಿ ಘಾಟ್ ಸಮೀಪ ಕಾರು ನಿಲ್ಲಿಸಿದ ತಂಡ ಡ್ರಾಗರ್ ಮೂಲಕ ಕುತ್ತಿಗೆಗೆ ಇರಿಯಲು ಯತ್ನಿಸುತ್ತಿದ್ದಂತೆ, ಆತನ ಕುತ್ತಿಗೆ ಹಿಡಿದ ಕಬೀರ್ ಕಾರಿನಿಂದ ಹೊರಗಿಳಿದು ತಪ್ಪಿಸಿಕೊಂಡಿದ್ದಾರೆ.
ತಪ್ಪಿಸುವ ಧಾವಂತದಲ್ಲಿ ಹೊಂಡವೊಂದಕ್ಕೆ ಉರುಳಿ ಗಾಯವಾಗಿದೆ. ಅಲ್ಲಿಂದ ಕಾಡಿನ ದಾರಿಯಲ್ಲಿ ಓಡಿದ ಕಬೀರ್ ಅವರಿಗೆ ದೂರದಲ್ಲಿ ಮನೆಯೊಂದು ಗೋಚರಿಸಿ ಅಲ್ಲಿ ತೆರಳಿ ವಿಚಾರ ತಿಳಿಸಿದರು. ಮನೆಮಂದಿ ಟೀಶರ್ಟ್, ಚಪ್ಪಲಿಯನ್ನು ಒದಗಿಸಿ ಬಳಿಕ ರಿಕ್ಷಾವೊಂದಕ್ಕೆ ಕರೆ ಮಾಡಿ ಮಂಗಳೂರಿಗೆ ಬಿಡುವಂತೆ ತಿಳಿಸಿದ್ದಾರೆ.
ಕಾರಿನಲ್ಲಿದ್ದ ಐವರು ಅಪಹರಣಕಾರರು ಟ್ಯಾಬ್ಲೆಟ್ ಸ್ಟಿಪ್ ಹಿಡಿದುಕೊಂಡು ಸಂಪೂರ್ಣ ನಶೆಯಲ್ಲಿದ್ದರು. ದಾರಿಯುದ್ದಕ್ಕೂ ಟ್ಯಾಬ್ಲೆಟ್ ಸೇವಿಸುತ್ತಿದ್ದ ಐವರು ಕಬೀರ್ ಗೆ ನಿರಂತರವಾಗಿ ಹಲ್ಲೆ ಮುಂದುವರಿಸಿದ್ದರು. ಅವರ ಮೊಬೈಲಿಗೆ ಬಂದ ಕರೆಯಲ್ಲಿ ‘ಕಬೀರ್ ನನ್ನು ಹತ್ಯೆ ನಡೆಸಿ ಘಾಟಿ ಭಾಗದಲ್ಲಿ ಯಾರಿಗೂ ಹೆಣ ಸಿಗದಂತೆ ಬಿಸಾಡಿರಿ’ ಅನ್ನುವ ಸೂಚನೆಯನ್ನು ನೀಡುತ್ತಲೇ ಇದ್ದರು ಎಂದು ಕಬೀರ್ ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದಕುತ್ತಾಲ್, ಉಗ್ರಾಣಿ ಮುನ್ನಾ, ಇರ್ಷಾದಿ ಹಾಗೂ ತಾಹಿಬ್ ಎಂಬವರನ್ನು ಬಂಧಿಸಿದ್ದಾರೆ.
ಫಿಶ್ ಮಿಲ್ ಹೋರಾಟ ವಿಚಾರವಾಗಿ ಕೊಲೆ ಯತ್ನ ನಡೆದಿದೆ ಎಂದು ಹಲ್ಲೆಗೊಳಗಾದ ಕಬೀರ್ ಆರೋಪಿಸಿದ್ದಾರೆ.ಫಿಶ್ ಮಿಲ್ ಕಡೆಯಿಂದ ಆರೋಪಿಗಳು ಲಕ್ಷಾಂತರ ಹಣ ಪಡೆದಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಕಬೀರ್ ಊರಿಡೀ ಹೇಳಿ ತಿರುಗಾಡಿದ್ದಾರೆಂದು ಸಿಟ್ಟಿನಲ್ಲಿ ಕೊಲೆಗೆ ಯತ್ನ ನಡೆದಿದೆ ಎಂದು ಕಬೀರ್ ಹೇಳಿದ್ದಾರೆ..