ಬಂಟ್ವಾಳ: ಉಂಡ ಮನೆಗೆ ಕನ್ನ ಹಾಕಿ ಚಿನ್ನಾಭರಣಗಳನ್ನು ಕಳವು ಗೈದ ಆರೋಪಿಗಳಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪತ್ತೆಹಚ್ಚಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಕೇರಳದ ಮಂಜೇಶ್ವರ ಮೂಲದ ಅಶ್ರಪ್ ಆಲಿ ಮತ್ತು ಬೆಂಗ್ರೆಯ ಕಬೀರ್ ಎಂದು ಗುರುತಿಸಲಾಗಿದೆ.
ಸುಮಾರು 7-8 ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿ ಮೊಹಮ್ಮದ್ ಜಾಪರುಲ್ಲಾ ಜೊತೆಗೆ ಕೆಲಸಮಾಡುತ್ತಿದ್ದ ಅಶ್ರುಪ್ ಆಲಿ ಎಂಬಾತ ಕಟ್ಟಡ ಕಾಮಗಾರಿಯ ಜೊತೆಗೆ ಅವರ ಮನೆಗೆಲಸ ಕೂಡ ಮಾಡಿಕೊಂಡಿದ್ದ. ಅ.18 ರಂದು ಜಾಪರುಲ್ಲಾ ಮನೆಯವರು ಸಂಬಂಧಿಕರ ಮನೆಗೆ ಹೋಗುವಾಗ ಮನೆಗೆ ಬೀಗ ಹಾಕಿ ಹೋಗಿದ್ದುರು. ಮನೆಯ ಮಾಲಿಕ ಜಾಪರುಲ್ಲಾ ಅಗತ್ಯ ಕೆಲಸವಿದ್ದ ಕಾರಣ ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯವರ ವಿಶ್ವಾಸವನ್ನು ಗಳಿಸಿದ್ದ ಅಶ್ರುಪ್ ಆಲಿಯ ಹತ್ತಿರ ಮನೆಯ ಬೀಗದ ಕೀಯನ್ನು ಮೊಹಮ್ಮದ್ ಜಾಪರುಲ್ಲಾ ನೀಡಿದ್ದರು.
ಮೊಹಮ್ಮದ್ ಜಾಪರುಲ್ಲಾ ಸಹಿತ ಮನೆಯವರು ಅವರ ವೈಯಕ್ತಿಕ ಕೆಲಸ ಮುಗಿಸಿಕೊಂಡು ಆ. 23 ರಂದು ಕೋಡಿಮಜಲು ಮನೆಗೆ ಬಂದಾಗ ಮನೆಯ ಎದುರಗಡೆ ಬಾಗಿಲಿಗೆ ಲಾಕ್ ಆಗಿದ್ದು, ಮನೆಯ ಬೀಗದ ಕೀ ಗಾಗಿ ಅಶ್ರುಪ್ ಆಲಿಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಆತನ ಮೊಬೈಲ್ ನಂಬರ್ ಸ್ವಿಚ್ ಆಪ್ ಆಗಿತ್ತು. ಸಂಶಯಗೊಂಡು ಮನೆಯ ಹೊರಗಿನಿಂದ ಕಿಟಕಿ ಮೂಲಕ ಇಣುಕಿ ನೋಡಿದಾಗ ಬೆಡ್ ರೂಮಿನಲ್ಲಿರುವ ಕಪಾಟಿನ ಬಾಗಿಲು ತೆರೆದಿದ್ದು ಕಂಡು ಬಂದಿದೆ. ಮನೆಯ ಕಪಾಟಿನಲ್ಲಿದ್ದ 27,50,000/-ನಗದು ಹಾಗೂ ರೂ 4,96,000 /-ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ, ಆರೋಪಿಗಳಿಂದ ಸುಮಾರು 4,50,000/- ಮೌಲ್ಯ ಚಿನ್ನ ಮತ್ತು ರೂ 4,00,000/-ನಗದನ್ನು ವಶಪಡಿಸಿಕೊಂಡಿರುತ್ತಾರೆ.