ಕೇರಳ: ಸಾಲದ ಸುಳಿಯಲ್ಲಿ ಸಿಲುಕಿ ಮನೆ ಜಪ್ತಿಯ ಆತಂಕದಲ್ಲಿದ್ದವನನ್ನು ಲಾಟರಿ ರಕ್ಷಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಪೂಕುಂಞಗೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಸುಮಾರು 12 ಲಕ್ಷ ರೂಪಾಯಿ ಸಾಲ ಮರುಪಾವತಿಸಲು ಸೂಚಿಸಿ ಬ್ಯಾಂಕ್ ಜಪ್ತಿ ನೋಟಿಸ್ ನೀಡತ್ತು. ನೋಟಿಸ್ ಸ್ವೀಕರಿಸಿದ ಒಂದೂವರೆ ಗಂಟೆಯ ನಂತರ ಅವರಿಗೆ ಅವರು ಸಹೋದರ ಕರೆ ಮಾಡಿ, 70 ಲಕ್ಷ ರೂಪಾಯಿ ಲಾಟರಿ ಹೊಡೆದಿರುವ ವಿಚಾರ ತಿಳಿಸಿದ್ದಾರೆ.
ಮೈನಾಗಪಳ್ಳಿಯ ಪಾಲಮೂತಿಲ್ ನಿವಾಸಿ ಪೂಕುಂಞ ಮೀನು ಮಾರಾಟಗಾರರಾಗಿದ್ದು, ಬೈಕ್ ನಲ್ಲಿ ಮೀನು ಮಾರಾಟ ಮಾಡಿ ಬಂದ ಹಣದಲ್ಲಿ ಕುಟುಂಬವನ್ನು ನಿರ್ವಹಿಸುತ್ತಿದ್ದರು.ಎಂಟು ವರ್ಷಗಳ ಹಿಂದೆ ಪೂಕುಂಞ ಅವರು ಮನೆ ಕಟ್ಟಲು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ 7.45 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಅಂದಿನಿಂದ ಸಾಲ ತೀರಿಸಲು ಹರಸಾಹಸ ಪಡುತ್ತಿದ್ದಾರೆ. ಈಗ ಬಡ್ಡಿ ಸೇರಿ ಸುಮಾರು 12 ಲಕ್ಷ ರೂ.ಆಗಿತ್ತು.
ಸಾಲ ಮರು ಪಾವತಿಸಿದ ಪೂಕುಂಞ ಅವರ ಮನೆ ಜಪ್ತಿ ಮಾಡಲು ನಿರ್ಧರಿಸಿದ್ದ ಬ್ಯಾಂಕ್ ಗುರುವಾರ ನೋಟಿಸ್ ನೀಡಿತ್ತು. ನೋಟಿಸ್ ಬಂದ ನಂತರ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದರು ಮತ್ತು ಬಹುತೇಕ ಮನೆ ಕಳೆದುಕೊಳ್ಳುವ ಹಂತದಲ್ಲಿದ್ದರು.ಆದರೆ, ಮಧ್ಯಾಹ್ನ 3.30 ರ ಸುಮಾರಿಗೆ ಅವರಿಗೆ ಅನಿರೀಕ್ಷಿತ ಕರೆ ಬಂದಿದ್ದು, ಅಕ್ಷಯ ಲಾಟರಿಯಲ್ಲಿ ಅಗ್ರ ಬಹುಮಾನ ಗೆದ್ದಿರುವುದಾಗಿ ಅವರ ಸಹೋದರ ತಿಳಿಸಿದ್ದಾರೆ.ಇದರಿಂದ ನೋವಿನಲ್ಲಿದ್ದ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಪೂಕುಂಞ ಪತ್ನಿ ಮಮ್ತಾಜ್ , ಮಗ, ಮಗಳು ಸೇರಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.