ಕೊಚ್ಚಿ: ದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್ವೇಯಿಂದ ಜಾರಿ ಅಪಘಾತವಾಗಿದೆ. ದುರಂತದಲ್ಲಿ ಇಬ್ಬರು ಮಕ್ಕಳು ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ. 123 ಜನ ಗಾಯಗೊಂಡಿದ್ದಾರೆ. 25 ಜನರ ಸ್ಥಿತಿ ಗಂಭೀರವಾಗಿದೆ.
ಸಂಜೆ 7:45 ಕ್ಕೆ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 174 ಪ್ರಯಾಣಿಕರು 10 ಮಕ್ಕಳು 5 ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿ 191 ಪ್ರಯಾಣಿಕರು ವಿಮಾನದಲ್ಲಿದ್ದರು. ರನ್ವೇಯಿಂದ ಕಣಿವೆಗೆ ಜಾರಿದ ಪರಿಣಾಮ ವಿಮಾನ ಇಬ್ಭಾಗವಾಗಿದೆ.
ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಮತ್ತಷ್ಟು ವಿಮಾನಗಳು ಕೇರಳಕ್ಕೆ ಧಾವಿಸಿದೆ. ಅಲ್ಲಿ ಪರಿಸ್ಥಿತಿ ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ದೆಹಲಿ ಮತ್ತು ಮುಂಬೈಯಿಂದ ಎರಡು ವಿಶೇಷ ವಿಮಾನಗಳನ್ನು ಕಳುಹಿಸಲಾಗಿದೆ.
ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶಕರು(ಡಿಜಿಸಿಎ), ವಿಮಾನ ಅಪಘಾತ ತನಿಖಾ ಸಂಸ್ಥೆ(ಎಎಐಬಿ) ಮತ್ತು ವಿಮಾನ ಸುರಕ್ಷತಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.