ಕಾರವಾರ: ಕೊರೋನಾ ಸೋಂಕಿತ ಯುವಕನ ಅಜ್ಜಿಯೊಬ್ಬರು ಖಿನ್ನತೆಗೊಳಗಾಗಿ ಇಂದು ಬೆಳಗಿನ ಜಾವ ಕ್ವಾರಂಟೈನ್ ಕೇಂದ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಹಳೆಯ ದಾಂಡೇಲಿ ಮೂಲದ 24 ವರ್ಷದ ಯುವಕನೊಬ್ಬನಿಗೆ ಕೋವಿಡ್-19 ಸೋಂಕು ಇರುವುದು ಬುಧವಾರ (ಮೇ 20) ದೃಢವಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಈತನನ್ನು ಕಾರವಾರ ಕ್ರಿಮ್ಸ್ ಕರೊನಾ ವಾರ್ಡ್ ಗೆ ದಾಖಲಿಸಲಾಗಿತ್ತು.
ಈ ಯುವಕನ ಪ್ರಾಥಮಿಕ ಸಂಪರ್ಕಕ್ಕೆ ಬಂದ 62 ವರ್ಷದ ಅಜ್ಜಿ ಸೇರಿ 23 ಜನರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಕ್ವಾರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಖಿನ್ನತೆಗೆ ಒಳಗಾದ ಅಜ್ಜಿ ಆಸ್ಪತ್ರೆಯ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ.
ಚಾಲಕ ವೃತ್ತಿ ಮಾಡುತ್ತಿದ್ದ ಅಜ್ಜಿಯ ಮೊಮ್ಮಗ ಗುಜರಾತ್, ಗೋವಾ, ಹಳಿಯಾಳ ಸುತ್ತಾಡಿ ದಾಂಡೇಲಿಗೆ ಬಂದಿದ್ದ. ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗದ ಈತನನ್ನು ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ ಹಿಡಿದು ಕ್ವಾರಂಟೈನ್ ಮಾಡಿದ್ದರು. ಆರೋಗ್ಯ ತಪಾಸಣೆ ಮಾಡಿದಾಗ ಈತನ ಕರೊನಾ ಸೋಂಕು ಇರುವುದು ದೃಢ ಪಟ್ಟಿತ್ತು.