ಕಾರ್ಕಳ: ಸಂಘಪರಿವಾರಗಳಾದ ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗಳ ದಳ ಕಾರ್ಯಕರ್ತರ ತಂಡದ ನಡುವೆ ತಲವಾರು ದಾಳಿ ನಡೆದಿದ್ದು, ಈ ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನೊಬ್ಬನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ (ಮಾ.14ರಂದು) ತಡರಾತ್ರಿ 10:30ರ ಸುಮಾರಿಗೆ ನಿಟ್ಟೆ ಪರಪ್ಪಾಡಿ ನಿವಾಸಿ ಅನಿಲ್ ಪೂಜಾರಿ(29) ಎಂಬವರ ಮೇಲೆ ಪರಪ್ಪಾಡಿ ಎಂಬಲ್ಲಿ ಆರೋಪಿಗಳಾದ ಬಜರಂಗದಳ ಕಾರ್ಯಕರ್ತರೆನ್ನಲಾದ ಸುನೀಲ್, ಸುಧೀರ್, ಪ್ರಸಾದ್, ಶರತ್, ಜಗದೀಶ್ ಪೂಜಾರಿ ಎಂಬವರು ಅನಿಲ್ ಮೇಲೆ ತಲವಾರು ದಾಳಿ ನಡೆಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಯುಧಗಳಾದ ತಲವಾರು ಹಾಗೂ ಮರದ ಸೋಂಟೆಯೊಂದಿಗೆ ಅನಿಲ್ ಪೂಜಾರಿಯವರ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆನ್ನಲಾಗಿದೆ. ಬಳಿಕ ಮನೆಯೊಳಗೆ ನುಗ್ಗಿದ ಆರೋಪಿಗಳು, ತಡೆಯಲು ಬಂದ ಅನಿಲ್ ತಾಯಿ ಸುಗುಣಾರನ್ನು ತಳ್ಳಿ ಹಾಕಿ ಕಾಲಿನಿಂದ ತುಳಿದಿದ್ದರೆಂದು ದೂರಲಾಗಿದೆ. ಈ ವೇಳೆ ಸುಧೀರ್ ಮತ್ತು ಸುನೀಲ್ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಅನಿಲ್ ತಲೆಗೆ ದಾಳಿ ಮಾಡಿದ್ದರೆ, ಉಳಿದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಅನಿಲ್ ಹಾಗೂ ಅವರ ತಾಯಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೆ, ಎರಡು ದಿನಗಳ ಹಿಂದೆ ಆನೆಕೆರೆಯಲ್ಲಿ ಹಿಂದೂ ಯುವತಿಯೊಂದಿಗಿದ್ದ ಅನ್ಯಕೋಮಿನ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ವಿಚಾರವಾಗಿ ಎರಡು ಸಂಘಟನೆಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು. ಅಲ್ಲದೆ, ಈ ವಿಚಾರ ಎರಡು ಸಂಘಟನೆಗಳ ನಡುವೆ ಪ್ರತಿಷ್ಠೆಯ ಗುದ್ದಾಟಕ್ಕೆ ಕಾರಣವಾಗಿತ್ತು. ಇದುವೇ ಮಾರಾಮಾರಿಗೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದೆ.