ಬೆಳ್ಮಣ್: ತಾಳೆ ಮರದಿಂದ ಶೇಂದಿ ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ಮರದಲ್ಲೇ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿ ಹಾಕಿಕೊಂಡ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಕಡಂದಲೆಯಲ್ಲಿ ನಡೆದಿದೆ.
ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬವರು ಸುಮಾರು 20 ವರ್ಷಗಳಿಂದ ಶೇಂದಿ ವ್ಯಾಪಾರ ಮಾಡುತ್ತಿದ್ದು, ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರವೇರಿದವರು ಮೂರ್ಛೆ ತಪ್ಪಿ ಸುಮಾರು 8.30ರವರೆಗೆ ತಾಳೆ ಮರದ ದಂಡುಗಳ ನಡುವೆ ಸಿಲುಕಿದ್ದರು.

ಆ ಸಂದರ್ಭ ಸಂಕಲಕರಿಯ ಪೊರ್ಲು ಲಂಚ್ ಹೋಮ್ ಮಾಲಕರಾದ ಸುಧಾಕರ್ ಸಾಲ್ಯಾನ್ ಅವರು ಶೇಂದಿ ತರಲು ಎಂದಿನಂತೆ ತಮ್ಮ ಕಾರಿನಲ್ಲಿ ಬಂದಿದ್ದಾರೆ ಆಗ ಜನ ಸೇರಿದ್ದನ್ನು ಕಂಡ ಅವರು ವಿಷಯ ತಿಳಿದು ಕೂಡಲೇ ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ವ್ಯಕ್ತಿಯನ್ನು ಮರದಿಂದ ಹಗ್ಗದ ಮೂಲಕ ಕೆಳಗಿಳಿಸಿದ್ದಾರೆ. ಸಂತೋಷ್ ರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕಾರಿನಲ್ಲಿ ಕೂರಿಸಿ ಹೊರಡುವ ಹೊತ್ತಿಗೆ ಮೂರ್ಛೆ ತಪ್ಪಿದ ಸಂತೋಷ್ ಎಚ್ಚರಗೊಂಡಿದ್ದಾರೆ.
ಸಂತೋಷರ ಜೀವವುಳಿಸಿದ ಸುಧಾಕರ ಸಾಲ್ಯಾನ್, ಅಶೋಕ, ದಿನೇಶ, ನಾರಾಯಣ ಹಾಗೂ ಅಗ್ನಿಶಾಮಕದಳದವರ ಶ್ರಮಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ಶೇಂದಿ ವ್ಯಾಪಾರ ನಡೆಸುತ್ತಿದ್ದ ಸಂತೋಷನ ಅಣ್ಣ ಅಣ್ಣಿ ಪೂಜಾರಿ ಎಂಬಾತನೂ ತಾಳೆ ಮರದಲ್ಲೇ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.