ಬಂಟ್ವಾಳ: ಶಾಲಾ ವಾರ್ಷಿಕೋತ್ಸವದಲ್ಲಿ ದೈವಾರಾಧನೆಯ ಸನ್ನಿವೇಶದ ಛದ್ಮವೇಷ ಪ್ರದರ್ಶನ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ.
ವಿಟ್ಲದ ಖಾಸಗಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾಂತಾರ ಚಿತ್ರದ ದೈವಾರಾಧನೆಯ ಸನ್ನಿವೇಶವನ್ನು ಛದ್ಮವೇಷದ ಮೂಲಕ ಪ್ರದರ್ಶಿಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಟಿವಿಗಳಲ್ಲಿನ ರಿಯಾಲಿಟಿ ಶೋಗಳಲ್ಲಿ ಕಾಂತಾರ ಚಲನಚಿತ್ರದಲ್ಲಿ ಕಾಣುವ ಪಂಜುರ್ಲಿಯಂತೆ ವೇಷಧರಿಸಿ ಹಾಡು ಹಾಕಿ ಕುಣಿದು ಚಪ್ಪಾಳೆ ಗಿಟಿಸುವುದಕ್ಕೆ ದೈವಾರಾಧಕರು ಹಾಗೂ ತುಳುನಾಡಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.ಇದೀಗ ಸ್ಕೂಲ್ ಡೇಯಲ್ಲೂ ಅದೇ ರೀತಿ ವೇಷ ಧರಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬಾಲಕನೊಬ್ಬ ಕೈಯಲ್ಲಿ ದೈವದ ಆಯುಧವನ್ನು ಹಿಡಿದುಕೊಂಡು ನರ್ತಿಸುವ ಸನ್ನಿವೇಶವನ್ನು ಮಕ್ಕಳು ಹಾಗೂ ಶಿಕ್ಷಕರು ಕೈಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿರುವುದು ಕೂಡಾ ಕಂಡು ಬಂದಿದೆ. ಇದೆಲ್ಲಾ ಎಷ್ಟರ ಮಟ್ಟಿಗೆ ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.