ಬೆಂಗಳೂರು: ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರಿಗೆ ಬೆದರಿಕೆ ಹಾಕಿ ನಿಂದಿಸಿದ ಪ್ರಕರಣ ಸಂಬಂಧ ಗೃಹಸಚಿವರಿಗೆ ದೂರು ಸಲ್ಲಿಕೆಯಾಗಿದೆ. ಬೆದರಿಕೆ ಹಾಕಿದ ಆರೋಪಿ ಪ್ರಶಾಂತ ಬಂಗೇರ ಬಂಧಿಸಿ ಶಿಕ್ಷೆ ನೀಡುವಂತೆ ಗೃಹಸಚಿವರಿಗೆ ದೂರು ಸಲ್ಲಿಸಲಾಗಿದೆ. ಬೆಂಗಳೂರಿನ ಕಂಬಳ ಅಭಿಮಾನಿಗಳು ಬೆಂಗಳೂರಿನ ಆರ್.ಟಿ. ನಗರದ ಗೃಹ ಸಚಿವರ ಖಾಸಗಿ ನಿವಾಸದಲ್ಲಿ ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಕಂಬಳ ಕೂಟದಲ್ಲಿ ಅತ್ಯಂತ ವೇಗದ ಓಟದ ದಾಖಲೆ ಹೊಂದಿರುವ ಶ್ರೀನಿವಾಸ ಗೌಡರು ಪ್ರಶಾಂತ್ ಬಂಗೇರನ ಬೈಗುಳ ಹಾಗೂ ಪ್ರಾಣ ಬೆದರಿಕೆಯಿಂದ ಮಾನಸಿಕ ಆಘಾತಗೊಳಗಾಗಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಜುಲೈ 15ರಂದೇ ದೂರು ನೀಡಲಾಗಿದ್ದರೂ, ಆರೋಪಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಶ್ರೀನಿವಾಸ ಗೌಡರಿಗೆ ಅವಾಚ್ಯ ಶಬ್ದಗಳಿಂದ ಬೈದು, ಗೌಡರ ಕುಟುಂಬದವರಿಗೂ ಅಶ್ಲೀಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯೊಡ್ಡಿರುವ ಪ್ರಶಾಂತ್ ಬಂಗೇರನನ್ನು ಬಂಧಿಸಿ ಸೂಕ್ತ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಅವನ ಈ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲಿಸುವವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣಾಧಿಕಾರಿಗೆ ಮಂಗಳೂರು ಪೊಲೀಸ್ ಕಮಿಷನರ್ ರವರ ಮೂಲಕ ಸೂಕ್ತ ನಿರ್ದೇಶನ ನೀಡುವಂತೆ ಮತ್ತು ಶ್ರೀನಿವಾಸ ಗೌಡರಿಗೆ ಸೂಕ್ತ ಭದ್ರತೆ ನೀಡಲು ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕೆಂದು ಗೃಹಸಚಿವರಿಗೆ ಮನವಿ ಸಲ್ಲಿಸಲಾಗಿದೆ.