ಪುತ್ತೂರು; ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಡಬ ಮೂಲದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕು ಕೊಯಿಲ ಗ್ರಾಮದ ಕಲಾಯಿ ನಿವಾಸಿಯಾಗಿದ್ದು ಪ್ರಸ್ತುತ ಮಂಜೇಶ್ವರ ಉಪ್ಪಳ ಗ್ರಾಮದ ಕೈಕಂಬ ಜಂಕ್ಷನ್ ಇಂಡಿಯನ್ ಗ್ಯಾರೇಜ್ ಬಳಿ ವಾಸವಿರುವ ಇಬ್ರಾಹಿಂ ಖಲಂದರ್ ಯಾನೆ ಇಬ್ರಾಹಿಂ ಬಂಧಿತ ಆರೋಪಿ.
ಈತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಸಂಪ್ಯ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಉದಯರವಿ ಅವರ ಸಲಹೆಯಂತೆ ಗ್ರಾಮಾಂತರ ಠಾಣಾ ಹೆಡ್ಕಾನ್ಸ್ಟೇಬಲ್ಗಳಾದ ಹರೀಶ್, ಪ್ರವೀಣ್ ಮತ್ತು ಕಾನ್ಸ್ಟೇಬಲ್ ಸಚಿನ್ರವರು ಜ.19ರಂದು ಕಾಸರಗೋಡು ವಿದ್ಯಾನಗರದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಫೆ.2ರ ತನಕ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಆರೋಪಿ ವಿರುದ್ಧ ಪುತ್ತೂರು ನಗರ, ಉಪ್ಪಿನಂಗಡಿ, ಕಡಬ, ಮೂಡಬಿದ್ರೆ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು ವಿಚಾರಣೆಗೆ ಹಾಜರಾಗದೇ ಇರುವುದರಿಂದ ಅಲ್ಲಿಯೂ ವಾರಂಟ್ ಜಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.