ಮುಂಬೈ: ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲದ ತಿರುವನ್ನು ಪಡೆದುಕೊಳ್ಳುತ್ತಿದೆ. ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಬಣಕ್ಕೆ ಹೋಗುತ್ತಿರುವ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಇದೀಗ ಮತ್ತೆ ನಾಲ್ವರು ಶಾಸಕರು ಶಿಂಧೆಯನ್ನು ಸೇರಿದ್ದಾರೆ. ನಿನ್ನೆಯಷ್ಟೇ (ಬುಧವಾರ) ಫೇಸ್ಬುಕ್ ನೇರಪ್ರಸಾರದಲ್ಲಿ ಮಾತನಾಡಿದ್ದ ಸಿಎಂ ಉದ್ಧವ್ ಠಾಕ್ರೆ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿ ಕುಳಿತುಕೊಳ್ಳಲಿಲ್ಲ. ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಆದರೆ ರೆಬೆಲ್ ಆಗಿರುವ ಯಾವುದೇ ಒಬ್ಬ ಶಾಸಕ ಹೇಳಿದರೂ ನಾನು ರಾಜೀನಾಮೆಗೆ ಸಿದ್ಧ ಎಂದಿದ್ದರು. ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಯಾಗಿ ಮುಂದುವರೆಯಲು ನನಗೂ ಇಷ್ಟವಿಲ್ಲ. ರಾಜೀನಾಮೆ ಪತ್ರ ಕೂಡ ರೆಡಿ ಇದೆ. ರಾಜೀನಾಮೆ ಬಗ್ಗೆ ಇದಾಗಲೇ ರಾಜ್ಯಪಾಲರಿಗೂ ತಿಳಿಸಿದ್ದೆನೆ. ನನ್ನ ಶಾಸಕರೇ ನನಗೆ ಮೋಸ ಮಾಡಿದ್ದಾರೆ ಎಂದಿದ್ದರು.
ಆದರೆ ಈಗಿನ ಪರಿಸ್ಥಿತಿ ಗಮನಿಸುತ್ತಿದ್ದರೆ ಇನ್ನು ಕೆಲವೇ ಕ್ಷಣಗಳಲ್ಲಿ ಠಾಕ್ರೆ ರಾಜೀನಾಮೆ ನೀಡುವ ಸಾಧ್ಯತೆ ಗೋಚರಿಸುತ್ತಿದೆ. ಸದ್ಯ ಬಂಡಾಯ ಎದ್ದಿರುವ 42 ಶಾಸಕರು ಶಿಂಧೆ ಜತೆಯಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಇವರ ಪೈಕಿ 34 ಶಿವಸೇನಾ ಶಾಸಕರು ಹಾಗೂ ಎಂಟು ಮಂದಿ ಪಕ್ಷೇತರರು. ಇಂದು ಬೆಳಗ್ಗೆ ಏಳು ಮಂದಿ ಶಾಸಕರು ಶಿಂಧೆಯನ್ನು ಸೇರಿದ್ದಾರೆ ಎನ್ನಲಾಗಿದೆ. ಆದ್ದರಿಂದ ಶಿವಸೇನಾ ಉರುಳಿಸಲು ಇನ್ನಿಬ್ಬರು ಶಾಸಕರು ಸಾಕಾಗಿದೆ ಎಂದು ಮೂಲಗಳು ಹೇಳಿವೆ. ಸದ್ಯ ಶಿವಸೇನೆ 55 ಶಾಸಕರನ್ನು ಹೊಂದಿದ್ದು, ಠಾಕ್ರೆ ವಿರುದ್ಧ ಬಂಡೆದ್ದ ಶಾಸಕರ ಸಂಖ್ಯೆ 37 ದಾಟಿದರೆ ಮಾತ್ರ ಪಕ್ಷದ ಮೇಲಿನ ನಿಯಂತ್ರಣ ಬಂಡಾಯ ಗುಂಪಿನ ಪಾಲಾಗುತ್ತದೆ. ಪಕ್ಷಾಂತರ ವಿರೋಧಿ ಕಾಯ್ದೆಯೂ ಇದನ್ನೇ ಹೇಳಿರುವುದರಿಂದ ಏಕನಾಥ್ ಶಿಂಧೆ ಶಿವಸೇನೆಯ ಹೊಸ ನಾಯಕನಾಗಬಹುದು. ಚುನಾವಣಾ ಆಯೋಗ ಕೂಡ ಈ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. 287 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 143 ಶಾಸಕರ ಬೆಂಬಲ ಬೇಕು. ಬಿಜೆಪಿ ಬಳಿ 106 ಶಾಸಕರಿದ್ದು, ಬಂಡಾಯ ಗುಂಪಿನ 44 ಶಾಸಕರ ಬೆಂಬಲದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆಯೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸಭೆ ಕರೆದಿದ್ದಾರೆ.