ಉತ್ತರಪ್ರದೇಶ: ಮದುವೆಯಂದು ಮುಹೂರ್ತ ಕಳೆದರೂ ವರ ಬಾರದೇ ಇದ್ದದ್ದಕ್ಕೆ ಕೋಪಗೊಂಡ ವಧು ಬೇರೊಬ್ಬನನ್ನು ವಿವಾಹವಾದ ಘಟನೆ ಉತ್ತರ ಪ್ರದೇಶದ ಬಿಜನೂರಿನಲ್ಲಿ ನಡೆದಿದೆ.
ಇಲ್ಲಿನ ಯುವತಿಯೊಬ್ಬಳ ವಿವಾಹ ಮೊನ್ನೆ ನಿಗದಿಯಾಗಿತ್ತು. ಮದುವೆಯ ಮುಹೂರ್ತ ಮಧ್ಯಾಹ್ನ 1.30ಕ್ಕೆ ಫಿಕ್ಸ್ ಆಗಿತ್ತು. ಮಧ್ಯಾಹ್ನ ಕಳೆದು, ಸಂಜೆ ಕಳೆದರೂ ವರನ ಕಡೆಯವರ ಪತ್ತೆಯೇ ಇಲ್ಲ. ಈಗ ಬರುತ್ತೇವೆ, ಆಗ ಬರುತ್ತೇವೆ, ದಾರಿಯ ಮೇಲೆ ಇದ್ದೇವೆ ಎಂದೆಲ್ಲಾ ಹೇಳುತ್ತಿದ್ದ ವರನ ಕಡೆಯವರು ರಾತ್ರಿಯಾಗುತ್ತಾ ಬಂದರೂ ಪತ್ತೆಯೇ ಇಲ್ಲ. ವಧುವಿನ ಕೋಪ ನೆತ್ತಿಗೇರಿತ್ತು, ಇತ್ತ ಆಕೆಯ ಮನೆಯವರು ಕೂಡ ಕಾದೂ ಕಾದೂ ಸುಸ್ತಾಗಿ ಹೋಗಿದ್ದರು.
ಅಂತೂ ರಾತ್ರಿ ವರ ಮತ್ತು ಆತನ ಕುಟುಂಬದವರು ಮಂಟಪ ತಲುಪಿದರು. ವಧುವಿನ ಕಡೆಯವರಿಗೆ ಅದೆಲ್ಲಿಯ ಕೋಪ ಇತ್ತೋ ಗೊತ್ತಿಲ್ಲ. ವರನನ್ನು ಒಂದು ರೂಮಿನಲ್ಲಿ, ಆತನ ಕುಟುಂಬದವರನ್ನು ಇನ್ನೊಂದರಲ್ಲಿ ಕೂಡಿ ಹಾಕಿ ಚೆನ್ನಾಗಿ ಹಲ್ಲೆ ಮಾಡಿದ್ದಾರೆ. ವರನ ಕಡೆಯವರು ಈ ರೀತಿ ಮಾಡುವುದಕ್ಕೂ, ವಧುವಿನ ಕಡೆಯವರು ಹಲ್ಲೆ ಮಾಡುವುದಕ್ಕೂ ಒಂದು ಕಾರಣವಿದೆ. ಅವನು ಲೇಟಾಗಿ ಬಂದದ್ದೊಂದೇ ಕಾರಣವಲ್ಲ, ಬದಲಿಗೆ ಸಾಮೂಹಿಕ ವಿವಾಹದಲ್ಲಿ ಇಬ್ಬರ ಮದುವೆಯಾದ ಮೇಲೆ ಆತನ ಮನೆಯವರು ವರದಕ್ಷಿಣೆ ಬೇಡಿಕೆ ಇಟ್ಟಿದ್ದರು. ಈ ವಿಷಯದಲ್ಲಿ ಎರಡೂ ಕುಟುಂಬದ ನಡುವೆ ಗಲಾಟೆಯಾಗಿದೆ. ವಧುವಿನ ಮನೆಯವರಿಗೆ ಬುದ್ಧಿ ಕಲಿಸಲು ವರ ರಾತ್ರಿ ಬಂದರೆ, ಅವರಿಗೆ ಬುದ್ಧಿ ಕಲಿಸಲು ಇವರು ಚೆನ್ನಾಗಿ ಹೊಡೆದಿದ್ದಾರೆ.
ಅದಾಗಲೇ ಮದುವೆಯನ್ನು ಕ್ಯಾನ್ಸಲ್ ಮಾಡುವ ಯೋಚನೆಯನ್ನು ವಧು ಹಾಗೂ ಆಕೆಯ ಪಾಲಕರು ಮಾಡಿಯಾಗಿತ್ತು. ಆದ್ದರಿಂದ ಹಲ್ಲೆ ಮಾಡಿದ ನಂತರ ಮದುವೆ ಕ್ಯಾನ್ಸಲ್ ಆಗಿದೆ ಎಂದು ಹೇಳಿ ವರ ಹಾಗೂ ಆತನ ಕಡೆಯವರನ್ನು ವಾಪಸ್ ಕಳಿಸಿದ್ದಾರೆ. ಇದೇ ವೇಳೆ, ಅದೇ ಸಿಟ್ಟಿನಲ್ಲಿ ಅದೇ ಗ್ರಾಮದ ಯುವಕನ ಜತೆ ಗ್ರಾಮಸ್ಥರ ಸಮ್ಮುಖದಲ್ಲಿ ವಧುವಿನ ಮದುವೆಯನ್ನೂ ನೆರವೇರಿಸಿದ್ದಾರೆ.