ಬೆಂಗಳೂರು: ಅಕ್ಟೋಬರ್ 16 ರಂದು ಬೆಂಗಳೂರಿನಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶ ನಡೆಯಲಿದೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮೀನುಗಾರಿಕಾ ಸಚಿವ ಎಸ್. ಅಂಗಾರ ಸಮಾವೇಶದ ಕುರಿತು ವಿವರಣೆ ನೀಡಿದ್ದಾರೆ. ಸಮಾವೇಶಕ್ಕೆ ಬರುವ ರೈತರಿಗೆ ಮೀನು ಕೃಷಿ ಬಗ್ಗೆ ಮಾಹಿತಿ ನೀಡಲಾಗುತ್ತದೆ ಮತ್ತು ರೈತರಿಗೆ ಪ್ರೇರಣೆ ನೀಡುವ ಕೆಲಸ ಈ ಕಾರ್ಯಾಗಾರದ ಮೂಲಕ ಆಗುತ್ತದೆ ಎಂದು ಸಚಿವ ಅಂಗಾರ ತಿಳಿಸಿದ್ದಾರೆ.
ಅಲ್ಲದೇ, ಮೀನುಗಾರಿಕೆ ಇಲಾಖೆಗೆ ಕೇಂದ್ರ ಸರ್ಕಾರ 7,025 ಸಾವಿರ ಕೋಟಿ ಅನುದಾನ ನೀಡಿತ್ತು, ಆದರೆ ನಾವು ಮೀನುಗಾರಿಕೆ ಇಲಾಖೆಯಲ್ಲಿ ಈಗಾಗಲೇ 7,060 ಕೋಟಿ ರೂ. ಮೂರು ವರ್ಷದಲ್ಲಿ ಖರ್ಚು ಮಾಡಿದ್ದೇವೆ, ಕಾರ್ಯಾಗಾರ ಮುಗಿದ ಬಳಿಕ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ ಎಂದು ಅಂಗಾರ ಹೇಳಿದ್ದಾರೆ.
ಇನ್ನು ರೈತರು ಮೀನುಗಾರಿಕೆಗೆ ತೊಡಗಿಸಿಕೊಳ್ಳುವ ರೀತಿಯಲ್ಲಿ ಸಮಾವೇಶದಲ್ಲಿ ಮಾಹಿತಿ ನೀಡುತ್ತೇವೆ ಎಂದು ಹೇಳಿರುವ ಸಚಿವರು, ಇದು ರೈತರ ಅಭಿವೃದ್ಧಿ ಹಾಗೂ ಬೆಳವಣಿಗೆ ಪೂರಕವಾದ ಕಾರ್ಯಕ್ರಮ ಎಂದಿದ್ದಾರೆ. ಇದರ ಜೊತೆಗೆ ಮೀನುಗಾರಿಕೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿ ಇದ್ದು, ಮುಂದಿನ ದಿನ ಮೊದಲನೇ ಸ್ಥಾನಕ್ಕೆ ಹೋಗಬೇಕು ಎಂದು ಸಚಿವ ಅಂಗಾರ ಆಶಯ ವ್ಯಕ್ತಪಡಿಸಿದ್ದಾರೆ.