ಬೆಂಗಳೂರು: ಕರಾವಳಿ ಪ್ರದೇಶದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಭಾರತದ ಪ್ರಥಮ ಮರೀನಾ ವನ್ನು ಬೈಂದೂರಿನಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸಿಆರ್ ಝಡ್ ಗೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಬರುವ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಬೀಚ್ ಪ್ರವಾಸೋದ್ಯಮ , ಯಾತ್ರಾ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದ್ದಾರೆ.
ನಮ್ಮ ನಾಗರೀಕತೆ ದೊಡ್ಡದಿದೆ. ಅದರೆ ನಾಗರಿಕತೆಯೇ ಸಂಸ್ಕೃತಿಯಲ್ಲ. ನಾವೇನು ಇದ್ದೇವೆ ಅದು ನಾಗರಿಕತೆ, ನಾವೇನಾಗಿದ್ದೇವೆ ಅದು ನಮ್ಮ ಸಂಸ್ಕೃತಿ. ಇಂದಿನ ಈ ಕಾರ್ಯಕ್ರಮ ನಾಗರಿಕತೆಯಿಂದ ಸಂಸ್ಕೃತಿಯ ಕಡೆಗಿನ ನಡಿಗೆ ಆಗಿದೆ. ನಮ್ಮ ಶಿಲ್ಪ ಕಲೆಯ ಮುಖಾಂತರ ನಮ್ಮ ಇತಿಹಾಸ, ಸಂಸ್ಕೃತಿಯ ಕಡೆಗೆ ಕರೆದೊಯ್ಯುವ ಕೆಲಸವನ್ನು ಇಂದು ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಅಲ್ಲದೇ ಮನುಷ್ಯ ಇತಿಹಾಸದ ಭಾಗವಾಗಬೇಕು ಇಲ್ಲವೇ ಇತಿಹಾಸ ಸೃಷ್ಟಿಸಬೇಕು. ಅನೇಕ ಅದ್ಬುತಗಳಿವೆ ಅವುಗಳನ್ನು ಹುಡುಕುವ ಕೆಲಸಮಾಡಬೇಕಿದೆ. ಮುಂದಿನ ಜನಾಂಗಕ್ಕೆ ನಮ್ಮ ಇತಿಹಾಸವನ್ನು ತೋರಿಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.