ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರೇರಿತ ಟಿಆರ್ ಎಫ್ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ತಿರುಗೇಟು ನೀಡಿದೆ.
ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಅಟ್ಟಾರಿ-ವಾಘಾ ಗಡಿಯನ್ನು ತಕ್ಷಣದಿಂದಲೇ ಮುಚ್ಚಲು ತೀರ್ಮಾನಿಸಲಾಗಿದ್ದು, 1966ರ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡಲು ಭಾರತ ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡದಿರಲು ಕೂಡಾ ನಿರ್ಧರಿಸಲಾಗಿದ್ದು, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳಲ್ಲಿ ದೇಶ ತೊರೆಯಲು ಗಡುವು ನೀಡಲಾಗಿದೆ.
ಅಲ್ಲದೇ, ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಗಡಿಪಾರು ಮಾಡಲು ತೀರ್ಮಾನಿಸಿದ್ದು, ಭಾರತ ತ್ಯಜಿಸಲು ಒಂದು ವಾರದ ಅವಧಿ ನೀಡಲಾಗಿದೆ.
ಪಾಕಿಸ್ತಾನದಲ್ಲಿರುವ ಭಾರತೀಯ ದೂತಾವಾಸದ ಸಿಬ್ಬಂದಿಯನ್ನು ಭಾರತ ವಾಪಸ್ ಕರೆಸಿಕೊಳ್ಳಲಿದ್ದು, ಪಾಕಿಸ್ತಾನಿ ಪ್ರಯಾಣಿಕರಿಗೆ ಸಾರ್ಕ್ ವೀಸಾದಡಿ ಭಾರತಕ್ಕೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ.
ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸಾಗಿದ್ದ ಪ್ರಧಾನಿ ಮೋದಿ ಇಂದು ಸಂಜೆ ತುರ್ತು ಕ್ಯಾಬಿನೆಟ್ ಸಮಿತಿ ಸಭೆ ನಡೆಸಿದ್ದರು.