ಕುಳಾಯಿ: ಇಂಟರ್ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ವತಿಯಿಂದ ಮಂಗಳೂರಿನ ಕುಳಾಯಿಯಲ್ಲಿ ಭಕ್ತಿ ವೇದಾಂತ ಶ್ರೀಲ ಪ್ರಭುಪಾದರಿಂದ ಸ್ಥಾಪಿಸಿರುವ, 25 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ರಾಧಾ ಗೋವಿಂದ ಮಂದಿರವು ಸೋಮವಾರ ಲೋಕಾರ್ಪಣೆಗೊಂಡಿದೆ.
ಶ್ರೀ ರಾಧಾ ಗೋವಿಂದ ಮತ್ತು ಇಸ್ಕಾನ್ ಸಂಸ್ಥಾಪಕಾಚಾರ್ಯ ಶ್ರೀಲ ಪ್ರಭುಪಾದರ ವಿಗ್ರಹಗಳನ್ನು ನೂತನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಮಂಗಳಾರತಿ ಅನಂತರ ಅಭಿಷೇಕ ಮತ್ತು ಹೋಮ ನೆರವೇರಿತು. ಇಸ್ಕಾನ್ ಸನ್ಯಾಸಿ, ಗುರು ಮತ್ತು ಜಿಬಿಸಿ ಜಯಪಾತಕ ಸ್ವಾಮಿ ಮಹಾರಾಜರು ವರ್ಚುವಲ್ ಮೂಲಕ ಭೇಟಿ ಮಾಡಿದರು. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ಜರಗಿತು.
ಈ ಸಂದರ್ಭದಲ್ಲಿ ಶಾಸಕ ಡಾ| ವೈ. ಭರತ್ ಶೆಟ್ಟಿ, ಇಸ್ಕಾನ್ ಸನ್ಯಾಸಿ ಭಕ್ತಿ ಪ್ರಚಾರ್ ಪರಿವ್ರಾಜಕ ಸ್ವಾಮಿ ಮಹಾರಾಜ್, ಇಸ್ಕಾನ್ ಪರೀಕ್ಷಾ ಮಂಡಳಿ ಅಧ್ಯಕ್ಷ ಅತುಲ್ ಕೃಷ್ಣ ದಾಸ್, ಶ್ರೀಲ ಪ್ರಭುಪಾದರ ಹಿರಿಯ ಶಿಷ್ಯರು ಮತ್ತು ಪ್ರಚಾರಕ ಜೀವನಾಥ್ ದಾಸ್, ಇಸ್ಕಾನ್ ಚೆನ್ನೈ ಅಧ್ಯಕ್ಷೆ ಸುಮಿತ್ರಾ ಕೃಷ್ಣ ದಾಸ್, ಗಣ್ಯರು, ಕೃಷ್ಣ ಭಕ್ತರು ಸೇರಿದ್ದರು.
ಇಲ್ಲಿ ಜಗತ್ತಿನಾದ್ಯಂತವಿರುವ ಭಕ್ತರಿಗೆ ವಸತಿ ತರಬೇತಿ ಶಿಕ್ಷಣ (ಆಫ್ಲೈನ್ ಭಗವದ್ಗೀತೆ ಕೋರ್ಸ್), ಸಾಂಸ್ಕೃತಿಕ-ಆಧ್ಯಾತ್ಮಿಕ ಕಾರ್ಯಕ್ರಮಗಳು, ಪ್ರತಿದಿನ ಆನ್ಲೈನ್ ತರಗತಿಗಳು (ಈ ತರಗತಿಗಳಲ್ಲಿ ಆರಂಭಿಕ, ಮಧ್ಯಾಂತರ ಮತ್ತು ಮುಂದುವರಿದ ಹಂತಗಳು)ಮತ್ತು ವರ್ಣ ಚಿತ್ರ ಗ್ಯಾಲರಿ ಸೇರಿದಂತೆ ಭಕ್ತರಿಗೆ ಉಚಿತ ಪ್ರಸಾದ ವಿತರಣೆಯ ವ್ಯವಸ್ಥೆಯು ಇರುತ್ತದೆ.