ಮಂಗಳೂರು : ಮಹಿಳೆಯರ ಸುರಕ್ಷೆ ನಿಟ್ಟಿನಲ್ಲಿ ರಾಜ್ಯದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ನೀಡುವ ಉದ್ದೇಶದಿಂದ ರಾಜ್ಯದ 67 ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ‘ಮಹಿಳಾ ವಿಶ್ರಾಂತಿ ಕೊಠಡಿ’ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ.
ಈ ಪೈಕಿ ಕರಾವಳಿಯ ನಾಲ್ಕು ಬಸ್ ನಿಲ್ದಾಣಗಳಲ್ಲಿ ಸದ್ಯದಲ್ಲಿಯೇ ಈ ವ್ಯವಸ್ಥೆ ನಿರ್ಮಾಣವಾಗಲಿದೆ. ಮಂಗಳೂರು ಮತ್ತು ಕುಂದಾಪುರ ಬಸ್ ನಿಲ್ದಾಣದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಆದರೆ ಉಡುಪಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನೂತನವಾಗಿ ನಿರ್ಮಾಣವಾಗುತ್ತಿದ್ದು, ಅಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇನ್ನು, ಪುತ್ತೂರು ವಿಭಾಗದ ಒಟ್ಟು ಎಂಟು ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ಇದ್ದು, ನೆಲ್ಯಾಡಿ, ಉಜಿರೆ, ಹೆಬ್ಟಾಲೆ, ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ತಾಯಂದಿರು ಮಗುವಿಗೆ ಹಾಲುಣಿಸಲು ಕೊಠಡಿಯ ಕೊರತೆ ಇತ್ತು. ಇದೀಗ ನಿರ್ಮಾಣವಾಗುವ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಇದಕ್ಕೆ ಪ್ರತ್ಯೇಕ ಜಾಗ ಇರಲಿದೆ. ಮಹಿಳಾ ಕೊಠಡಿಯಲ್ಲಿ ಸುಮಾರು 15 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಇರಲಿದೆ. ಮಗುವಿಗೆ ಎದೆ ಹಾಲು ಉಣಿಸಲು ಉಪಯೋಗಿಸಬಹುದಾಗಿದೆ. ಈ ಕೊಠಡಿಯ ಒಳಗೆ ಶೌಚಾಲಯ ವ್ಯವಸ್ಥೆಯೂ ಇರಲಿದೆ.