ಮಂಗಳೂರು: ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದ ಬಳಿ ನಡೆದಿದ್ದು, ಈ ಬಗ್ಗೆ ಅರಣ್ಯ ಸಂಚಾರ ದಳದವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ಸಂಜೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿರುವುದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್ಇಸಿಎಫ್) ಹರೀಶ್ ಮತ್ತು ಇತರ ಕಾರ್ಯಕರ್ತರು ನೋಡಿದ್ದು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಖಾಸಗಿ ವಾಹನದಲ್ಲಿ ‘ಪರವಾನಗಿ ಇಲ್ಲದೆಯೇ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಆ ವಾಹನವನ್ನು ಹಿಂಬಾಲಿಸಿ ಪಂಪ್ವೆಲ್ ಬಳಿ ತಡೆಯಲು ಯತ್ನಿಸಿದ್ದೆವು. ನಮ್ಮನ್ನು ನೋಡಿದ ಚಾಲಕ, ಮರದ ದಿಮ್ಮಿಗಳಿದ್ದ ವಾಹನವನ್ನು ಹೊಯ್ಗೆಬಜಾರ್ನ ಅರಣ್ಯ ಇಲಾಖೆಯ ಜಾಗದಲ್ಲಿ ನಿಲ್ಲಿಸಿದ’ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ, ‘ಈಗಾಗಲೇ ನಮ್ಮಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು, ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೋರಿದ್ದರು. ನಾವು ಆರು ಮರಗಳನ್ನು ಕಡಿಯಲು ಅನುಮತಿ ನೀಡಿದ್ದೆವು. ಅನುಮತಿ ನೀಡಲಾದ ಮರ ಬಿಟ್ಟು ಬೇರೆ ಮರಗಳನ್ನು ಕಡಿದಿದ್ದರೆ, ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರ ಕಡಿದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಬುಧವಾರದಂದು ನಿರೀಕ್ಷಣಾ ಮಂದಿರದ ಬಳಿಯ ಜಾಗವನ್ನು ಅರಣ್ಯ ಸಂಚಾರ ದಳದ ಸಿಬ್ಬಂದಿ ಪರಿಶೀಲಿಸಿದಾಗ ಅಲ್ಲಿ ಸಾಗುವಾನಿ ಮರಗಳ 24 ದಿಮ್ಮಿಗಳು ಪತ್ತೆಯಾಗಿದ್ದು, ಎರಡು ಮರಗಳ ರೆಂಬೆಗಳನ್ನು ಕತ್ತರಿಸಲು ಮಾತ್ರ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದ ಬಳಿ ಇದ್ದ ನಾಲ್ಕು ಸಾಗುವಾನಿ ಮರಗಳನ್ನು ಹಾಗೂ ದೇವದಾರು, ಕಂಬ ಅಶೋಕ ಹಾಗೂ ಉಪ್ಪಳಿಗೆ ಜಾತಿಯ ತಲಾ ಒಂದು ಮರ ಸೇರಿ ಏಳು ಮರಗಳನ್ನು ಕಡಿಯಲಾಗಿದೆ ಎಂದು ಅರಣ್ಯ ಸಂಚಾರ ದಳದ ಹಿರಿಯ ಅಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ವಲಯ ಅರಣ್ಯ ಅಧಿಕಾರಿಯವರು ಉಲ್ಲೇಖಿಸಿದ್ದಾರೆ.