ಉಪ್ಪಿನಂಗಡಿ : ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ಕಲ್ಬಾಗಿ ಜಾತಿಯ ಮರವನ್ನು ತುಂಡರಿಸಿ ಸಾಗಿಸುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯವರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರು ಕಡೆಯಿಂದ ಮಂಗಳೂರಿನ ಸುರತ್ಕಲ್ ಕಡೆಗೆ ಕಲ್ವಾಗಿ ಜಾತಿಯ ಮರದ ತುಂಡನ್ನು ಅಕ್ರಮವಾಗಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್.ಕೆ.ಕೆ ಅವರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 75 ರ ಪುತ್ತೂರು ತಾಲೂಕಿನ ಮಠ ಎಂಬಲ್ಲಿ ಜು. 20 ರಂದು ಮಧ್ಯಾಹ್ನ ಅಶೋಕ್ ಲೈಲಾಂಡ್ ಕಂಪನಿಯ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಅಕ್ರಮ ಸಾಗಾಟ ಮಾಡುವುದನ್ನು ಪತ್ತೆ ಹಚ್ಚಿದ್ದಾರೆ.
ಅಕ್ರಮವಾಗಿ ಲಾರಿಯಲ್ಲಿ 23 ಕಲ್ವಾಗಿ ಮರದ ತುಂಡುಗಳು. 5.743 ಘನ ಸೆ.ಮೀ ಮರವನ್ನು ಸಾಗಾಟ ಮಾಡಿದ ಲಾರಿ ಚಾಲಕ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ಪಿ.ಕೆ.ವಿಠಲ್ ಅವರ ಮಗನಾದ ನಿಖಿಲ್ ಸಂಗಮ್(26) ಎಂಬಾತನನ್ನು ಬಂಧಿಸಿ. ಲಾರಿಯಲ್ಲಿದ್ದ ಕಲ್ಬಾಗಿ ಮರದ ತುಂಡುಗಳು ಮತ್ತು ಲಾರಿಯನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್.ಕೆ.ಕೆ, ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ್ ಮತ್ತು ಯತೀಂದ್ರ ಕುಮಾರ್ , ಗಸ್ತು ಅರಣ್ಯ ಪಾಲಕ ವಿನಯ ಚಂದ್ರ ,ಸಿಬ್ಬಂದಿ ದಿನೇಶ್ , ಚಾಲಕ ತೇಜಸ್ ಕುಮಾರ್ ಮತ್ತು ಕಿಶೋರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.