ವಿಟ್ಲ: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಬುಡೋಳಿ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಶಾಸಕ ರಾಜೇಶ್ ನಾಯ್ಕ್ ಬೆಂಬಲಿಗರು ಒಂದು ಕಡೆಗೆ ಪರ್ಮಿಟ್ ಪಡೆದು ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಅವಧಿಯಲ್ಲಿ ಮರಳುಗಾರಿಕೆಗೆ ಕಾನೂನು ತಂದಿದ್ದು, ಅದರ ದುರುಪಯೋಗ ನಡೆಯುತ್ತಿದೆ. ರಾಜಾರೋಷವಾಗಿ ಯಂತ್ರಗಳ ಮೂಲಕ ಮರಳು ತೆಗೆಯಲಾಗುತ್ತಿದೆ. ಇಂತಹ ಮರಳುಗಾರಿಕೆಯಿಂದ ಮಸೀದಿ, ದೇವಸ್ಥಾನಕ್ಕೂ ತೊಂದರೆಯಾಗುತ್ತಿದೆ. ಇದು ದೇವಸ್ಥಾನದ ಅಸ್ಥಿತ್ವದ ಮೇಲೆ ಪರಿಣಾಮ ಬೀಳುತ್ತಿದೆ ಎಂದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಶಾಸಕರಿಗೆ , ಇಲಾಖೆಗೆ ಮಾಮೂಲಿ ಹೋಗುತ್ತಿದೆ. ದುಪ್ಪಟ್ಟು ಹಣ ನೀಡಿ ಬಡವರು ಮರಳು ಖರೀಸುವಂತಾಗಿದೆ. ಜನರಿಗೆ ಪರಿಹಾರ ಒದಗಿಸುವುದು ರಾಜಧರ್ಮವಾಗಿದೆ. ಆದರೆ ಇಲ್ಲಿ ಮರಳಿನಿಂದ ಲಕ್ಷ ಲಕ್ಷ ನುಂಗುತ್ತಿದ್ದಾರೆ. ಮರಳು ಅಡ್ಡೆಗೆ ದಾಳಿ ನಡೆಸಿದವರಿಗೆ ವರ್ಗಾವಣೆ ಬೆದರಿಕೆ ಬರುತ್ತಿದೆ ಎಂದರು.