ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈಗಾಗಲೇ ಸಂಸತ್ತಿನ ಭದ್ರತೆ ಉಲ್ಲಂಘಿಸಿದವರಿಗೆ ಪಾಸ್ ನೀಡಿದ ಆರೋಪದಲ್ಲಿ ಸುದ್ದಿಯಲ್ಲಿದ್ದು, ಇದೀಗ ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಆರೋಪದ ಮೇಲೆ ಅವರ ಸಹೋದರ ವಿಕ್ರಮ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯಿಲ್ಲದೆ ಬೆಲೆಬಾಳುವ ನೂರಾರು ಮರಗಳನ್ನು ಅನಧಿಕೃತವಾಗಿ ಕಡಿದು ಕಳ್ಳಸಾಗಣೆ ಮಾಡಿದ್ದು, ವಿಕ್ರಮ್ ಸಿಂಹ ವಿರುದ್ಧ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿ ಗ್ರಾಮದಲ್ಲಿ ದೂರು ದಾಖಲಾಗಿದೆ. ಬೇಲೂರು ತಹಶೀಲ್ದಾರ್ ಮಮತಾ ಅವರು ಗ್ರಾಮಕ್ಕೆ ತೆರಳಿ ನಡೆಸಿದ ರಹಸ್ಯ ಕಾರ್ಯಾಚರಣೆ ವೇಳೆಯಲ್ಲಿ ಸರ್ಕಾರಿ ಜಮೀನಿನಲ್ಲಿ ನಡೆದ ಈ ಕೃತ್ಯವು ಬೆಳಕಿಗೆ ಬಂದಿರುತ್ತದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಕಾಫಿ ಮತ್ತು ಶುಂಠಿ ಕೃಷಿ ಮಾಡುತ್ತಿದ್ದಾರೆ. ತಮ್ಮ 5 ಎಕರ ಸೇರಿದಂತೆ ಸರ್ಕಾರದ 12 ಎಕರ ಜಮೀನಿನಲ್ಲಿದ್ದ ನೂರಾರು ನಿಗದಿತ ಮರಗಳನ್ನು ಅನಧಿಕೃತವಾಗಿ ಕಡಿದು ಕಳ್ಳಸಾಗಾಣೆ ಮಾಡಿದ್ದಾರೆ.
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಮಾಧ್ಯಮಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿ, ಈ ವಿಚಾರದ ಕುರಿತು ವಿವರವಾದ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಆರೋಪಿಯ ರಾಜಕೀಯ ಪ್ರಭಾವ ಲೆಕ್ಕಿಸದೆ ಕಾನೂನಿನ ಪುಕಾರ ತ್ವರಿತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಆದರೆ ಘಟನೆಯ ಕುರಿತು ಎಫ್ಐಆರ್ ದಾಖಲಾಗಿ 10 ದಿನ ಕಳೆದರೂ ಇವರೆಗೂ ವಿಕ್ರಮ್ನನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.