ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೀಡಿರುವ ಹೇಳಿಕೆಯೊಂದರ ವಿರುದ್ಧ ಬಿಜೆಪಿ ಮತ್ತು ಕರಾವಳಿಯ ಹಿಂದು ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ್ದ ಮಿಥುನ್ ರೈ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಮಂಗಳೂರಿಗೆ ಯೋಗಿ ಬಂದರೆ ತಾನೇ ಅವರ ಮುಖಕ್ಕೆ ಮಸಿ ಬಳಿಯುವೆ, ಕರ್ನಾಟಕಕ್ಕೆ ಕಾಲಿಟ್ಟರೆ ನಮ್ಮ ಕಾರ್ಯಕರ್ತರು ಮಸಿ ಬಳಿಯುತ್ತಾರೆ ಎಂದು ನುಡಿದಿದ್ದರು. ಈ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಮಿಥುನ್ ರೈ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ.
ಯೋಗಿ ಆದಿತ್ಯನಾಥ್ ಅವರು ನಾಥ ಪರಂಪರೆಯ ಪರಮೋಚ್ಛ ಗುರು. ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠವೂ ಅದರ ಕೇಂದ್ರವಾಗಿದೆ. ಮಿಥುನ್ ರೈ ಹೇಳಿಕೆ ನಾಥ ಸಂಪ್ರದಾಯ ಮತ್ತು ಹಿಂದು ಸಮಾಜಕ್ಕೆ ಮಾಡಿದ ಅಪಮಾನ. ಇದಕ್ಕೆ ಹಿಂದು ಸಮಾಜ ತಕ್ಕ ಪಾಠ ಕಲಿಸಲಿದೆ. ಖಾವಿಗೆ ಅಪಮಾನ ಮಾಡಿದ್ದಕ್ಕೆ ಖಂಡಿತವಾಗಿಯೂ ಬೆಲೆ ತೆತ್ತಲಿದ್ದೀರಿ… ಎಂದು ಬಿಜೆಪಿ ಮತ್ತು ಕರಾವಳಿಯ ಹಿಂದು ಸಂಘಟನೆಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.