ಬಂಟ್ವಾಳ: ತನ್ನನ್ನು ನಂಬಿ ಮನೆ ಬೀಗ ಕೊಟ್ಟ ಮನೆ ಮಾಲೀಕನ ಮನೆಯನ್ನೇ ಕಾರ್ಮಿಕನೊಬ್ಬ ದೋಚಿದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೋಡಿಮಜಲು ನಿವಾಸಿಯಾಗಿರುವ ಇಮಾದ್ ಬಿಲ್ಡರ್ ಮಾಲೀಕ ಮೊಹಮ್ಮದ್ ಝಫರುಲ್ಲಾ ಎಂಬವರ ಬಳಿ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಮಂಜೇಶ್ವರ ಮೂಲದ ಆಲಿ ಎಂಬಾತ ಸೇರಿದ್ದ. ಆತನಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯ ಜೊತೆ ವಿವಾಹವಾಗಿದ್ದು, ಮಾಲೀಕರ ಜೊತೆ ಹೆಚ್ಚಿನ ವಿಶ್ವಾಸ ಹೊಂದಿದ್ದ. ಈ ಕಾರಣಕ್ಕಾಗಿ ಸಹಾಯಕನಾಗಿ ದುಡಿಯುತ್ತಿದ್ದ ಆಲಿಯಲ್ಲಿ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತೀ ವಿಶ್ವಾಸ ಮಾಲೀಕರಿಗೆ ಮುಳುವಾಗಿ ಪರಿಣಮಿಸಿದೆ.
ಅ.18 ರಂದು ಮನೆ ಮಂದಿ ಎಲ್ಲರು ಮನೆಗೆ ಬೀಗ ಹಾಕಿ ಮಂಗಳಾದೇವಿ, ಜಪ್ಪು ನಲ್ಲಿರುವ ತಮ್ಮನ ಮನೆಗೆ ಹೋಗಿದ್ದರು.ಮನೆಗೆ ಬೀಗ ಹಾಕಿ ಅದರ ಕೀ ಯನ್ನು ಆಲಿಯಲ್ಲಿ ನೀಡಿದ್ದರು. ಅ ಬಳಿಕ 19 ರಂದು ಕಟ್ಟಡ ಕಾಮಗಾರಿಯ ವಿಚಾರಕ್ಕೆ ಮಾಲೀಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು.ಆದರೆ ಪೋನ್ ಸ್ವಿಚ್ ಆಫ್ ಆಗಿರುವ ವಿಚಾರವನ್ನು ಅಷ್ಟಾಗಿ ಸೀರಿಯಸ್ ಆಗಿ ತೆಗೆದುಕೊಂಡಿರದ ಮಾಲಕರು ಮರುದಿನ ಅಂದರೆ ಅ. 20 ರಂದು ಅಗತ್ಯ ಕೆಲಸವೊಂದರ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿಂದ ಫೋನ್ ಮಾಡಿದಾಗಲೂ ಈತನ ಮೊಬೈಲ್ ಆಫ್ ಆಗಿತ್ತು.
ಕೆಲಸದ ಒತ್ತಡದ ನಡುವೆಯ ಅ. 23 ರಂದು ಊರಿಗೆ ವಾಪಾಸು ಆದ ಇವರು ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಹಾಕಿಕೊಂಡಿತ್ತು. ಕೀ ಕೊಡುವಂತೆ ಆತನಿಗೆ ಪೋನ್ ಮಾಡಿದಾಗ ಆಗಲೂ ಆಫ್ ಆಗಿತ್ತು. ಸಂಶಯದಿಂದ ಮನೆಯ ಹಿಂಬದಿಯಿಂದ ಕಿಟಕಿಯಲ್ಲಿ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿದ್ದು, ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತ್ತು.
ಕೂಡಲೇ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿ , ಪೋಲೀಸ್ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಮೊಹಮ್ಮದ್ ಅವರು ಕಪಾಟಿನಲ್ಲಿರಿಸಲಾಗಿದ್ದ ರೂ. 25 ಲಕ್ಷ ರೂಪಾಯಿ ಹಾಗೂ ಅವರ ತಂದೆಯ ಕಪಾಟಿನಲ್ಲಿರಿಸಲಾಗಿದ್ದ ರೂ.2,50,000 ರೂ ಹಾಗೂ 4,96,000 ರೂ. ಮೌಲ್ಯದ 24 ಗ್ರಾಂ ತೂಕದ ಬ್ರಾಸ್ ಲೈಟ್, 16 ಗ್ರಾಂ ತೂಕದ ಎರಡು ಚಿನ್ನದ ಉಂಗುರ, 40 ಗ್ರಾಂ ತೂಕದ ಚಿನ್ನದ ಬಲೆಗಳು, 8 ಗ್ರಾಂ ತೂಕದ ಚಿನ್ನದ ಬೆಂಡೋಲೆ, 32 ಗ್ರಾಂ.ತೂಕದ ಚಿನ್ನದ ಮಾಲೆ, 4 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಹಾಗೂ ಬೆರಳಚ್ಚು ತಜ್ಞರು,ಶ್ವಾನದಳದವರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.