ಮುಂಬೈ: ಕೊರೊನಾ ಸೋಂಕಿನಲ್ಲಿ ಮೊದಲೇ ಬೆಚ್ಚಿ ಬಿದ್ದಿರುವ ಮುಂಬೈ ನಗರಿ ಇದೀಗ ನಿಸರ್ಗ ಚಂಡಮಾರುತದಿಂದ ತತ್ತರಿಸಿ ಹೋಗಿದೆ. ಮುಂಬೈನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಮತ್ತು ಸಮುದ್ರ ಕಿನಾರೆಯಾಗಿರುವ ಆಲಿಭಾಗ್ ಪ್ರದೇಶದ (ರಾಯಿಗಡ್ ಜಿಲ್ಲೆ) ದಕ್ಷಿಣ ಭಾಗದಲ್ಲಿ ನೀರಿಕ್ಷೆಯಂತೆ 120-140 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸುತ್ತಿದೆ.

ವೇಗದಲ್ಲಿ ಚಂಡಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಭೂಕುಸಿತದ ಭೀತಿಯೂ ಉಂಟಾಗಿದೆ. ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದ್ದರೂ, ಭೂಕಸಿತದ ಭೀತಿ ಸರ್ಕಾರವನ್ನು ಕಂಗೆಡಿಸಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕರೊನಾ ವೈರಸ್ ರೋಗಿಗಳು ಸೇರಿದಂತೆ ಕನಿಷ್ಠ ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಚಂಡಮಾರುತ ಪರಿಣಾಮ ಮಹಾರಾಷ್ಟ್ರದ ಹಲವೆಡೆ ಈಗಾಗಲೇ ಭಾರಿ ಮಳೆ ಹಾಗು ಗಾಳಿ ಬೀಸುತ್ತಿದ್ದು, ಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಚಾವಣಿಗಳು ಹಾರಿ ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.
ಮುಂಬೈ ನಗರದಾದ್ಯಂತ ಅತ್ಯಂತ ಕಟ್ಟೆಚ್ಚರ ಘೋಷಿಸಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಜನ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ.