ಉಳ್ಳಾಲ: ಚರ್ಚಿಂದ ಮನೆಗೆ ಬಂದಿದ್ದ ಬಾಲಕ ದಿಢೀರನೆ ನಾಪತ್ತೆಯಾದ ಘಟನೆ ಇಂದು ಮಧ್ಯಾಹ್ನ ಉಳ್ಳಾಲ ಬೈಲ್,ಗಣೇಶ ನಗರದಲ್ಲಿ ನಡೆದಿದ್ದು ನಾಪತ್ತೆಯಾದ ಬಾಲಕ ಪಾವೂರು ಗ್ರಾಮದ ಅಜ್ಜಿ ಮನೆಯ ತೋಟದಲ್ಲಿ ಪತ್ತೆಯಾಗಿದ್ದಾನೆ. ಘಟನೆಯಿಂದ ಪೊಲೀಸರಲ್ಲದೆ ಬಾಲಕನ ಪೋಷಕರು,ಸ್ಥಳೀಯರು ಬೇಸ್ತು ಬಿದ್ದಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.
ಉಳ್ಳಾಲ ಬೈಲು ,ಗಣೇಶನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಸ್ಕಿನ ,ರೋಹಿತ ಬ್ರಾಕ್ಸ್ ದಂಪತಿಯ ಪ್ರಥಮ ಪುತ್ರ ರಿಯಾನ್ (9)ಇಂದು ಮದ್ಯಾಹ್ನ ಧಿಡೀರನೆ ನಾಪತ್ತೆಯಾಗಿದ್ದ. ರಿಯಾನ್ ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ತೊಕ್ಕೊಟ್ಟು ಚರ್ಚ್ಗೆ ತೆರಳಿದ್ದು ಮಧ್ಯಾಹ್ನ 1.35 ರ ಸುಮಾರಿಗೆ ವಾಪಾಸಾಗಿದ್ದ. ಚರ್ಚ್ ನಿಂದ ವಾಪಸಾದ ರಿಯಾನ್ ಗಣೇಶ್ ನಗರದ ತನ್ನ ದೊಡ್ಡಮ್ಮನ ಮನೆಗೆ ತೆರಳಿದ್ದು ಅಲ್ಲಿದ್ದ ರಿಯಾನ್ ತಾಯಿ ರೋಹಿತ ಅವರು ತಮ್ಮ ಬಾಡಿಗೆ ಮನೆಯ ಕೀಲಿ ಕೈಯನ್ನ ರಿಯಾನ್ ಗೆ ನೀಡಿ ಮನೆಗೆ ಹೋಗಲು ಹೇಳಿದ್ದಾರೆ. ರಿಯಾನ್ ತಾಯಿ ರೋಹಿತ ಅವರು 2 ಗಂಟೆ ಸುಮಾರಿಗೆ ಮನೆಗೆ ತೆರಳಿದಾಗ ಕಿಟಕಿಯಲ್ಲಿ ಮನೆಯ ಕೀಲಿ ಕೈ ಇದ್ದು ರಿಯಾನ್ ನಾಪತ್ತೆಯಾಗಿದ್ದ. ಗಾಬರಿಗೊಂಡ ರಿಯಾನ್ ಪೋಷಕರು, ಸ್ಥಳೀಯರು ಶೋಧ ನಡೆಸಿದ್ದು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಿಸಿಟಿವಿ ಫೂಟೇಜನ್ನ ಪರಿಶೀಲಿಸಿ ಶೋಧ ಕಾರ್ಯ ನಡೆಸಿದ್ದರು.
ನಾಪತ್ತೆಯಾದ ರಿಯಾನ್ ಸಂಜೆ ಹೊತ್ತಲ್ಲಿ ಪಾವೂರು ಗ್ರಾಮದ ಇನೋಳಿ, ಮಜಿಕಟ್ಟ ಎಂಬಲ್ಲಿನ ತನ್ನ ಅಜ್ಜಿ ಮನೆಯ ತೋಟದಲ್ಲಿ ಪತ್ತೆಯಾಗಿದ್ದಾನೆ.ರಿಯಾನ್ ಒಬ್ಬಂಟಿಯಾಗಿಯೇ ತೊಕ್ಕೊಟ್ಟಿನಿಂದ ಸಿಟಿ ಬಸ್ಸೊಂದನ್ನ ಏರಿ ಇನೋಳಿಗೆ ತೆರಳಿದ್ದು ನೇರವಾಗಿ ತೋಟಕ್ಕೆ ಹೋಗಿ ಅಡಿಕೆ ಹೆಕ್ಕುತ್ತಿದ್ದನಂತೆ. ಅಜ್ಜ ,ಅಜ್ಜಿ ಸಾವನ್ನಪ್ಪಿದ್ದು ಮನೆಯಲ್ಲಿದ್ದ ಚಿಕ್ಕಮ್ಮನಿಗೆ ರಿಯಾನ್ ಬಂದ ವಿಚಾರ ತಡವಾಗಿ ತಿಳಿದಿದೆ. ರಿಯಾನ್ ನಾಪತ್ತೆ ಬಗ್ಗೆ ಜಾಲತಾಣದಲ್ಲಿ ಸಂದೇಶವನ್ನು ನೋಡಿದ ಕೂಡಲೇ ಚಿಕ್ಕಮ್ಮ ರಿಯಾನ್ ಇರುವಿಕೆ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಸಂಜೆ ರಿಯಾನ್ ಮತ್ತೆ ನಗು,ನಗುತ್ತಾ ಮನೆಗೆ ಮರಳಿದ್ದು ಪೋಷಕರು,ಸ್ಥಳೀಯರು ನೆಮ್ಮದಿಯ ನಗು ಬೀರಿದ್ದಾರೆ.