ಬೆಂಗಳೂರು: ಕರಾವಳಿಯಲ್ಲಿ ಅಡಿಕೆ ಕೊನೆ ಕೊಯ್ಯಲು ಕೆಲಸಗಾರರ ಸಮಸ್ಯೆ ಎದುರಿಸುತ್ತಿದ್ದ ಅಡಿಕೆ ಬೆಳಗಾರರ ನೆರವಿಗೆ ರಾಜ್ಯ ಸರ್ಕಾರ ಬಂದಿದೆ. ಅಡಿಕೆ ಕೊನೆ ಕೊಯ್ಯುವ ಕಾರ್ಬನ್ ಫೈಬರ್ ದೋಟಿಯನ್ನು ಸಬ್ಸಿಡಿ ಉಪಕರಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ತೋಟಗಾರಿಕಾ ಇಲಾಖೆಯ ಸಬ್ಸಿಡಿ ಉಪಕರಣಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಕಾರ್ಬನ್ ಫೈಬರ್ ದೋಟಿ ಲಭ್ಯವಾಗಲಿದೆ. ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಫೈಬರ್ ದೋಟಿ ದುಬಾರಿ ಬೆಲೆಯಿಂದಾಗಿ ಅಡಿಕೆ ಬೆಳೆಗಾರರು ಸಮಸ್ಯೆ ಎದುರಿಸುರುತ್ತಿರುವ ಬಗ್ಗೆ ಶಾಸಕರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು. ಈ ವೇಳೆ ಫೈಬರ್ ದೋಟಿಯನ್ನು ಸಬ್ಸಿಡಿ ಪಟ್ಟಿಗೆ ಸೇರ್ಪಡೆಗೊಳಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ತೋಟಗಾರಿಕಾ ಸಚಿವ ಮುನಿರತ್ನ ಅವರಿಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದರು. ಅದರಂತೆ ಈಗ ಸಬ್ಸಿಡಿ ಉಪಕರಣಗಳ ಪಟ್ಟಿಗೆ ಕಾರ್ಬನ್ ಫೈಬರ್ ದೋಟಿ ಸೇರ್ಪಡೆಗೊಂಡಿದೆ.