ಬೆಂಗಳೂರು: ಆಸ್ಪತ್ರೆಗೆ ತೆರಳುತ್ತಿದ್ದಾಗ ಟ್ರಾಫಿಕ್ ನಲ್ಲಿ ಸಿಲುಕಿ ಹಾಕಿಕೊಂಡ ವೈದ್ಯರೊಬ್ಬರು ಕಾರನ್ನು ಅಲ್ಲೇ ಬಿಟ್ಟು ಮೂರು ಕಿ.ಮೀ. ದೂರದ ಆಸ್ಪತ್ರೆಗೆ ಓಡಿ ಹೋಗಿ ಶಸ್ತ್ರಚಿಕಿತ್ಸೆ ಮುಗಿಸಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ಬೆಂಗಳೂರಿನ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿತು. ಸುಮಾರು ಹೊತ್ತು ಕಾದರೂ ಟ್ರಾಫಿಕ್ ತೆರವಾಗಲಿಲ್ಲ. ಇದರಿಂದ ರೋಗಿಯ ಶಸ್ತ್ರಚಿಕಿತ್ಸೆಗೆ ತಡವಾಗುತ್ತಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯ ಡಾ.ಗೋವಿಂದ್ ನಂದಕುಮಾರ್ ಕೊಂಚ ಕೂಡ ತಡ ಮಾಡದೇ ಕೂಡಲೇ ಕಾರಿಂದ ಇಳಿದು ಮೂರು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಓಡಿಕೊಂಡು ಹೋಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ವೈದ್ಯ ಡಾ.ಗೋವಿಂದ್ ನಂದಕುಮಾರ್ ಅವರು, ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ವೇಳೆ ಶಸ್ತ್ರಚಿಕಿತ್ಸೆಗೆ ತಡವಾಗುತ್ತಿದೆ ಎಂಬ ಆತಂಕವಿತ್ತು. ಬೇರೆ ದಾರಿಯಿಲ್ಲದೇ ನಾನು ಗೂಗಲ್ ಮ್ಯಾಪ್ ನೆರವಿನಿಂದ ಆಸ್ಪತ್ರೆಗೆ ತೆರಳಲು ಮುಂದಾದೆ. ಕಾರನ್ನು ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡುವ ಉಳಿದ ಪ್ರಯಾಣವನ್ನು ಕವರ್ ಮಾಡಲು ನಿರ್ಧರಿಸಿದೆ. ನನ್ನ ಕಾರಿನ ಚಾಲಕನಿಗೆ ಹೇಳಿ ಓಡಲು ನಿರ್ಧರಿಸಿದೆ. ನಾನು ನಿಯಮಿತವಾಗಿ ಜಿಮ್ ಮಾಡಿದ್ದರಿಂದ ನನಗೆ ಓಡುವುದು ಸುಲಭವಾಯಿತು. ನಾನು ಆಸ್ಪತ್ರೆಗೆ ಮೂರು ಕಿಮೀ ಓಡಿ, ಮತ್ತು ಶಸ್ತ್ರಚಿಕಿತ್ಸೆಯ ಸಮಯಕ್ಕೆ ತೆರಳಿದ್ದೆ ಎಂದು ಹೇಳಿದ್ದಾರೆ.
ಇದೀಗ ವೈದ್ಯರ ಕರ್ತವ್ಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವೈದ್ಯೋ ನಾರಾಯಣೋ ಹರಿ ಎಂಬ ಮಾತಿಗೆ ಇವರೇ ಬೆಸ್ಟ್ ಎಕ್ಸಾಂಪಲ್ ಎಂದಿದ್ದಾರೆ.