Friday, June 27, 2025
Homeಕರಾವಳಿಕಡಬ; ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಪರ ಕೆಲಸ ಮಾಡಿದ ಆರೋಪ; ಐತ್ತೂರು ಗ್ರಾ.ಪಂ. ಸದಸ್ಯ ಪ್ರಾಥಮಿಕ...

ಕಡಬ; ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಪರ ಕೆಲಸ ಮಾಡಿದ ಆರೋಪ; ಐತ್ತೂರು ಗ್ರಾ.ಪಂ. ಸದಸ್ಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ

spot_img
- Advertisement -
- Advertisement -

ಕಡಬ: ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂಬ ಆರೋಪದಡಿ  ಬಿಳಿನೆಲೆ ವಲಯದ ಮಾಜಿ ಅಧ್ಯಕ್ಷ ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ್ ಗೋಳ್ಯಾಡಿ ಅವರನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಈ ಬಗ್ಗೆ   ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಬಿಳಿನೆಲೆ ಅವರು  ಗುರುವಾರ ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರ ಸ್ಪಷ್ಟ ಪಡಿಸಿದ್ದಾರೆ.

ಮನಮೋಹನ್ ಗೋಳ್ಯಾಡಿ ಅವರು ಬಿಜೆಪಿಯವರೊಂದಿಗೆ ಸೇರಿಕೊಂಡು ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.  ಬಗ್ಗೆ ಅವರಿಗೆ ತಿಳುವಳಿಕೆ ಪತ್ರ ನೀಡಲಾಗಿತ್ತು. ಕಾಂಗ್ರೆಸ್ ಬೆಂಬಲಿತ  ಐತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಅವರನ್ನು ಪದಚ್ಯುತಿಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದಾಗ  ಸ್ವತಃ ಕಾಂಗ್ರೆಸ್ ಬೆಂಬಲಿತರಾಗಿರುವ ಗ್ರಾ.ಪಂ. ಸದಸ್ಯ ಮನಮೋಹನ್ ಗೋಳ್ಯಾಡಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಶ್ಯಾಮಲಾ ಅವರು ಐತ್ತೂರು ಗ್ರಾ.ಪಂ. ಅಧ್ಯಕ್ಷರಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದರೂ  ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿಯವರೊಂದಿಗೆ ಸೇರಿಕೊಂಡು ಅಧ್ಯಕ್ಷರ ಪದಚ್ಯುತಿಗೆ ಹುನ್ನಾರ ನಡೆಸಿದ್ದರು.

ನ್ಯಾಯಾಲಯ ಅವಿಶ್ವಾಸ ನಿರ್ಣಯಕ್ಕೆ ತಡೆಯಾಜ್ಞೆ ನೀಡಿ ನ್ಯಾಯವನ್ನು ಎತ್ತಿ ಹಿಡಿದಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ   ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಕಾರ್ಯಕರ್ತರ ಆಶಯದಂತೆ ಅವರನ್ನು ಉಚ್ಛಾಟಿಸಬೇಕೆಂದು ನಿರ್ಣಯಿಸಿ  ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ಸು ಮಾಡಲಾಗಿತ್ತು.  ಇದೀಗ ಜಿಲ್ಲಾಧ್ಯಕ್ಷರು ಪಕ್ಷದಿಂದ ಎಲ್ಲಾ ರೀತಿಯ ಪ್ರಯೋಜನ ಪಡೆದು, ಗೌರವ ಹಾಗೂ ಹುದ್ದೆಗಳನ್ನು ಅನುಭವಿಸಿ ಪಕ್ಷದ ವಿರುದ್ಧವೇ ಕೆಲಸ ಮಾಡಿರುವ  ಇವರನ್ನು ಉಚ್ಛಾಟಿಸುವಂತೆ ಸೂಚನೆ ನೀಡಿದ್ದಾರೆ ಎಂದು ಸುಧೀರ್  ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬಳ್ಳೇರಿ, ಡಿಸಿಸಿ ಕಾರ್ಯದರ್ಶಿ ಸೈಮನ್ ಸಿ.ಜೆ., ಪ್ರಮುಖರಾದ ಸತೀಶ್ ನಾಯ್ಕ್ ಮೇಲಿನಮನೆ, ಶರೀಫ್ ಎ.ಎಸ್., ಸತೀಶ್ ಮೀನಾಡಿ ಉಪಸ್ಥಿತರಿದ್ದರು.

ಇತ್ತ ಐತ್ತೂರು ಗ್ರಾ.ಪಂ.ಅಧ್ಯಕ್ಷರು ತಮ್ಮದೇ ಪಕ್ಷ ಬೆಂಬಲಿತ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ.ಸದಸ್ಯರಾದ ಮನಮೋಹನ ಗೋಳ್ಯಾಡಿ, ಈರೇಶ್ ಹಾಗೂ ಪ್ರೇಮರವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿರುವುದಾಗಿ ಅವರು ತಿಳಿಸಿದ್ದರು

 

- Advertisement -
spot_img

Latest News

error: Content is protected !!