ಬೆಳ್ತಂಗಡಿ : ಕಾಜೂರು ಸಮೀಪದ ನಿವಾಸಿ ಅಲಿಮಮ್ಮ(85) ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು ಜೂ.23 ರಂದು ಒಬ್ಬರೇ ಕಾಜೂರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರಿಗೆ ಹೋಗುವ ಸರಕಾರಿ ಎಕ್ಸ್ ಪ್ರೆಸ್ ಬಸ್ಸಿಗೆ ಹತ್ತಿದ್ದರು. ಬಳಿಕ ವಯೋವೃದ್ಧೆಯ ಮಾತು ಕಂಡಕ್ಟರ್ ಗೆ ಅರ್ಥವಾಗದೇ ಗೇರುಕಟ್ಟೆಯಲ್ಲಿ ಕಂಡಕ್ಟರ್ ಇಳಿಸಿದ್ದಾರೆ.
ಬಸ್ಸಿನಲ್ಲಿ ಪುತ್ತೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಪೋಲಿಸ್ ಆಗಿದ್ದ ಸದ್ರಿ ಮಂಗಳೂರಿನ ಸೈಬರ್ ಕ್ರೈಂ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಬೆಳಾಲಿನ ಆದಂ ಎಂಬವರು ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ ಗೆ ಕರೆ ಮಾಡಿ ವೃದ್ಧೆಯನ್ನು ಇಳಿಸಿದ ಬಗ್ಗೆ ಮಾಹಿತಿ ನೀಡಿದರು.

ತಕ್ಷಣ ಅಬ್ದುಲ್ ಕರೀಂ ವೃದ್ಧೆ ಬಸ್ ಇಳಿದ ಪರಿಸರದಲ್ಲಿ ಬಂದು ಹುಡುಕಾಡಿದಾಗ ಬಸ್ಸ್ ನಿಲ್ದಾಣದಲ್ಲಿ ಒಂಟಿಯಾಗಿ ದಿಕ್ಕುತೋಚದೆ ಭಯ ಗೊಂಡು ಕುಳಿತಿದ್ದನ್ನು ನೋಡಿ ಹೋಗಿ ವಿಚಾರಿಸಿದಾಗ ಕಾಜೂರು ಕಡೆಯವರೆಂದು ತಿಳಿದು ಬಂದಿದ್ದರಿಂದ ಕಾಜೂರಿನ ದರ್ಗಾ ಶರೀಫ್ ನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ರವರ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದರು.
ಸ್ಥಳೀಯ ಅಟೋ ಚಾಲಕ ಹಿರಿಯರಾದ ಶೇಖುಂಙ ಎಸ್ ಮತ್ತು ಗೂಡಂಗಡಿ ಹಸೈನಾರ್ ಹಾಜಿ ರವರ ಸಹಕಾರದಲ್ಲಿ ಕಾಜೂರಿನ ಮಗಳ ಮನೆಗೆ ಸ್ವತಃ ಅಬ್ದುಲ್ ಕರೀಂ ಕೂಡ ಜೊತೆಯಲ್ಲಿ ಜೂ.23 ರಂದು ಸಂಜೆ ಹೋಗಿ ಈ ವೃದ್ಧೆಯನ್ನು ಮನೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.