ಕುಕ್ಕೆ ಸುಬ್ರಹ್ಮಣ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸರ್ಪದೋಷ ನಿವಾರಾಣಾರ್ಥವಾಗಿ ತಮ್ಮ ಕುಟುಂಬದ ವತಿಯಿಂದ ಸರ್ಪ ಸಂಸ್ಕಾರ ಸೇವೆ ನಡೆಸಲು ಸಂಕಲ್ಪ ಮಾಡಿದ ರಾಜ್ಯಪಾಲರು, ಶುಕ್ರವಾರ ಮುಂಜಾನೆ ಪೂಜೆ ಸಂಪನ್ನಗೊಳಿಸಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆಯಲಿದ್ದಾರೆ.
ಗುರುವಾರ ಬೆಳಗ್ಗೆ ಹಾಸನದಿಂದ ರಸ್ತೆ ಮೂಲಕ ಪತ್ನಿ ಅನಿತಾ ಗೆಹ್ಲೋಟ್ ಅವರ ಜತೆ ಆಗಮಿಸಿದ ರಾಜ್ಯಪಾಲರು ಮಧ್ಯಾಹ್ನ 12.45ಕ್ಕೆ ಕುಕ್ಕೆ ಕ್ಷೇತ್ರದ ಆದಿ ಶೇಷ ವಿವಿಐಪಿ ಗೆಸ್ಟ್ ಗೌಸ್ನ ಎದುರು ಬಂದಿಳಿದರು. ಅಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಘನತೆ ವೆತ್ತ ರಾಜ್ಯಪಾಲರಿಗೆ ಗೌರವ ರಕ್ಷೆ ನೀಡಲಾಯಿತು.
ಸರಕಾರಿ ಗೌರವ ಸ್ವೀಕರಿಸಿದ ಬಳಿಕ ರಾಜ್ಯಪಾಲರು ಆದಿಶೇಷ ಗೆಸ್ಟ್ ಹೌಸ್ನಲ್ಲಿ ತಮಗಾಗಿ ಸಜ್ಜುಗೊಳಿಸಿದ್ದ ವಿವಿಐಪಿ ಕೋಣೆಗೆ ತೆರಳಿದರು. ಅಲ್ಲಿ ಶ್ರೀ ದೇವಳದ ವತಿಯಿಂದ ರಾಜ್ಯಪಾಲರನ್ನು ಗೌರವಿಸಲಾಯಿತು. ಮಧ್ಯಾಹ್ನ 1.30ಕ್ಕೆ ಸಪತ್ನಿಕರಾಗಿ ದೇಗುಲಕ್ಕೆ ಆಗಮಿಸಿದ ರಾಜ್ಯಪಾಲರು ದೇವಳ ಒಳಾಂಗಣ ಪ್ರವೇಶಿಸದೆ ಹೊರಾಂಗಣದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ನಿಂತು ದೇವರಿಗೆ ಕೈ ಮುಗಿದರು. ಸರ್ಪ ಸಂಸ್ಕಾರ ಸೇವೆಯ ದೀಕ್ಷೆಯಲ್ಲಿರುವ ಕಾರಣ ಸೂತಕ ಅನ್ವಯವಾಗುವ ಹಿನ್ನೆಲೆಯಲ್ಲಿ ಅವರು ದೇವಳ ಪ್ರವೇಶ ಮಾಡಲಿಲ್ಲ.
ದೇವಳ ಹೊರಾಂಗಣದಿಂದ ಹಿಂದಿರುಗಿದ ರಾಜ್ಯಪಾಲರು ಅಲ್ಲಿಂದ ನೇರವಾಗಿ ಸರ್ಪ ಸಂಸ್ಕಾರ ಯಾಗ ಶಾಲೆಗೆ ತೆರಳಿದರು. ಇಂದು ಬೆಳಗ್ಗೆಯಿಂದಲೇ ರಾಜ್ಯಪಾಲರ ಕುಟುಂಬದ ಸರ್ಪ ಸಂಸ್ಕಾರ ಸೇವೆಗಾಗಿ ನಾನಾ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು. ಮಧ್ಯಾಹ್ನ ರಾಜ್ಯಪಾಲರು ಖುದ್ದು ಸಂಕಲ್ಪ, ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ವಿಶ್ರಾಂತಿ ಕೊಠಡಿಗೆ ತೆರಳಿದರು. ಶುಕ್ರವಾರ ಮುಂಜಾನೆ ಸರ್ಪ ಸಂಸ್ಕಾರ ಸೇವೆಯ ಅಂತಿಮ ಹಂತವಾದ ಪಿಂಡ ಪ್ರದಾನ ನಡೆಯಲಿದ್ದು, ಬಳಿಕ ಶುಚಿರ್ಭೂತರಾಗಿ ರಾಜ್ಯಪಾಲರು ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಾದ ಬಳಿಕ ಶ್ರೀದೇವರ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ನಿರ್ಗಮಿಸಲಿದ್ದಾರೆ.
ರಾಜ್ಯಪಾಲರ ಭೇಟಿಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 11.30ರಿಂದ 1 ಗಂಟೆಯವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸಾರ್ವಜನಿಕ ಭಕ್ತರ ದರ್ಶನವನ್ನು ನಿಲ್ಲಿಸಲಾಗಿತ್ತು.