ತಿರುವನಂತಪುರ: ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರ ನಡುವೆ ನಡೆದ ಸಭೆಯಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ವಿಧಿಸಲಾಗಿರುವ ನಿರ್ಬಂಧಗಳಲ್ಲಿ ಹೆಚ್ಚಿನ ಸಡಿಲಿಕೆ ನೀಡಲು ಕೇರಳ ಸರ್ಕಾರ ಇದೀಗ ನಿರ್ಧರಿಸಿದೆ.
ನೀಲಿಮಲೆ ಮತ್ತು ಅಪಾಚೆ ಮೇಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಪಾದಿಂದ ನೀಲಿಮಲೆ, ಅಪಾಚೆ ಮೇಡು ಹಾಗೂ ಮರಕೂಟಂ ಮೂಲಕ ಶಬರಿಮಲೆಗೆ ಸಾಂಪ್ರದಾಯಿಕ ಮಾರ್ಗವನ್ನು ಭಕ್ತರಿಗೆ ತೆರೆಯಲು ನಿರ್ಧರಿಸಲಾಗಿದೆ.
ಭಕ್ತರಿಗೆ ಸನ್ನಿಧಾನದಲ್ಲಿ ರಾತ್ರಿ ತಂಗಲು ಅವಕಾಶ ನೀಡಲಾಗಿದೆ. ಕೋವಿಡ್ ಪ್ರೋಟೋಕಾಲ್ಗಳಿಗೆ ಅನುಗುಣವಾಗಿ 500 ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಹಾಗೆ ಪಂಪಾ ನದಿಯಲ್ಲಿ ಸ್ನಾನ ಮತ್ತು ಬಲಿತರ್ಪಣ ಆಚರಣೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಪಂಪಾ ನದಿಯಲ್ಲಿನ ನೀರಿನ ಮಟ್ಟವನ್ನು ನಿರ್ಣಯಿಸಿದ ನಂತರ ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ.