ಬೆಂಗಳೂರು : ಕೊರೊನಾ ವೈರಾಣು ಸೋಂಕಿನಿಂದ ಲಾಕ್ ಡೌನ್ ಜಾರಿ ಮಾಡಿದ ಬಳಿಕ ಅತಿ ದೊಡ್ಡ ಮನರಂಜನಾ ಉದ್ಯಮವಾದ ಕಿರುತೆರೆಯ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು. ರಾಜ್ಯ ಸರ್ಕಾರ ಕೆಲ ನಿಬಂಧನೆಗಳನ್ನು ವಿಧಿಸಿ ಕಿರುತೆರೆಯ ಚಿತ್ರೀಕರಣಕ್ಕೆ ಅವಕಾಶ ಮಾಡಿ ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಕರ್ನಾಟ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಇದೇ ತಿಂಗಳ 25 ರಿಂದ ಧಾರಾವಾಹಿ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ.
ಈ ಕುರಿತಂತೆ ಸಂಘದ ಅಧ್ಯಕ್ಷ ಎಸ್.ವಿ ಶಿವಕುಮಾರ್ ನೇತೃತ್ವದಲ್ಲಿಂದು ನಡೆದ ಕಾರ್ಯಕಾರಿ ಸಮಿತಿಯಲ್ಲಿ ಮೇ.25 ರಿಂದ ಚಿತ್ರೀಕರಣ ನಡೆಸಲು ನಿರ್ಧರಿಸಿದೆ. ಈಗಾಗಲೇ ಕೆಲ ಸಮಸ್ಯೆಗಳಿದ್ದು ಬಹುತೇಕ ಕಾರ್ಮಿಕರು ತಂತ್ರಜ್ಞರು ಒಂದೆಡೆ ಇಲ್ಲದಿರುವ ಕಾರಣ ಮತ್ತು ಎಲ್ಲರ ಆರೋಗ್ಯದ ದೃಷ್ಟಿಯಿಂದ ಮತ್ತು ಸಾಮಾಜಿಕ ಕಳಕಳಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಚಾಲ್ತಿಯಲ್ಲಿದ್ದ ಧಾರಾವಾಹಿಗಳ ಚಿತ್ರೀಕರಣ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತಿದ್ದು ಇಂದಿನ ಸ್ಥಿತಿಗೆ ತಕ್ಕಂತೆ ಚಿತ್ರೀಕರಣ ಮಾಡಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹಳಷ್ಟು ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ಬರಹಗಾರರು ಊರುಗಳಿಗೆ ತೆರಳಿದ್ದಾರೆ. ನೂರಕ್ಕೂ ಹೆಚ್ಚು ಧಾರಾವಾಹಿಗಳಿಂದ 6 ಸಾವಿರಕ್ಕೂ ಅಧಿಕ ಕಲಾವಿದರು ,ತಂತ್ರಜ್ಞರು, ಕೆಲಸಮಾಡುತ್ತಿದ್ದು ಅವರೆಲ್ಲರ ಹಿತ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಚಾನೆಲ್, ನಿರ್ಮಾಪಕರು ಸೇರಿದಂತೆ ಎಲ್ಲರನ್ನು ಸಂಪರ್ಕಿಸಿ ಮೇ.25 ರಿಂದ ಚಿತ್ರೀಕರಣ ಮಾಡಲು ಸಮ್ಮತಿಸಲಾಗಿದೆ. ಸರ್ಕಾರ ಅನುಮತಿ ನೀಡಿದೆ ಎಂದು ನಾಳೆಯಿಂದಲೇ ಚಿತ್ರೀಕರಣ ಅಸಾದ್ಯ. ಕ್ರಿಯೇಟಿವ್ ಕೆಲಸ ಆಗಿರುವುದರಿಂದ ಎಲ್ಲರ ಸಹಕಾರದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಅಸೋಸಿಯೇಷನ್ ವತಿಯಿಂದ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ
ಈ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯದರ್ಶಿ ಡಿ.ಸಿ ವೀರೇಂದ್ರ ಬೆಳ್ಳಿಚುಕ್ಕಿ, ಸಂಘಟನಾ ಕಾರ್ಯದರ್ಶಿ ಗಣೇಶ್ ರಾವ್ ಕೇಸರ್ ಕರ್ ಸೇರಿದಂತೆ ಪದಾಧಿಕಾಗಿಳು ಭಾಗಿಯಾಗಿದ್ದರು.