ಮೂಡಿಗೆರೆ: ದಲಿತ ಯುವಕನನ್ನ ಕಾನೂನು ಬಾಹಿರವಾಗಿ ಬಂಧಿಸಿ, ಹಲ್ಲೆ ನಡೆಸಿದಲ್ಲದೆ ಠಾಣೆಯಲ್ಲಿದ್ದ ಇನ್ನೋರ್ವ ಬಂಧಿತನ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಪಿಎಸ್ಐ ಅರ್ಜುನ್ ಹೊರಕೇರಿಯನ್ನು ಅಮಾನತು ಮಾಡಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಆದೇಶ ನೀಡಿದ್ದಾರೆ.
ಪ್ರಕರಣವನ್ನು ನ್ಯಾಯೋಚಿತ ಮತ್ತು ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಕಿರಗುಂದ ಗ್ರಾಮದ ಪರಿಶಿಷ್ಟ ಜಾತಿ ಯುವಕ ಪುನೀತ್ ಎಂಬುವನನ್ನು ಮೇ 10 ರಂದು ಯಾವುದೇ ದೂರು ದಾಖಲಿಸಿಕೊಳ್ಳದೆ. ಪೋಲಿಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪಿಎಸ್ ಐ ಅರ್ಜುನ್, ಯುವಕ ಕುಡಿಯಲು ನೀರು ಕೇಳಿದಾಗ ಮತ್ತೋಬ್ಬ ಆರೋಪಿಯ ಮೂತ್ರ ಕುಡಿಸಿದ್ದಾರೆ ಮತ್ತು ನಕ್ಕಿದ್ದಾರೆ ಎಂದು ಪರಿಶಿಷ್ಟ ಜಾತಿ ಯುವಕ ಪುನೀತ್ ಆರೋಪಿಸಿ ಮೇ.22 ರಂದು ಗೋಣಿಬೀಡು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಪುತ್ತೂರು ಡಿವೈಎಸ್ ಪಿ ನೇತ್ರತ್ವದಲ್ಲಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.
ನಿನ್ನೆ ಕಿರುಗುಂದ ಗ್ರಾಮಕ್ಕೆ ಭೇಟಿ ನೀಡಿ ಎಸ್ಪಿ ವಿಚಾರಣೆ ನಡೆಸಿದ್ದರು. ಮೂತ್ರ ಕುಡಿಸಲಾಗಿದೆ ಎಂದು ಆರೋಪ ಮಾಡಿದ್ದ ಯುವಕನ ಬಳಿ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಆ ಬಳಿಕ ಗೋಣಿಬೀಡು ಠಾಣೆಯ ಸಿಬ್ಬಂದಿಯ ವಿಚಾರಣೆಯನ್ನು ಕೂಡ ನಡೆಸಲಾಗಿತ್ತು.