ಬೆಳ್ತಂಗಡಿ : ಸಹಕಾರಿ ಸಂಘದಲ್ಲಿ ಇಬ್ಬರು ಸಿಬ್ಬಂದಿಗಳು ಸಂಘದ ಅಕೌಂಟ್ ನಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವಂಚನೆ ಮಾಡಿದರಲ್ಲಿ 50% ಹಣವನ್ನು ವಾಪಸ್ ಸಂಘಕ್ಕೆ ಕಟ್ಟಿದ್ದಾರೆ. ಉಳಿದ ಹಣವನ್ನು ಕೂಡ ಕಟ್ಟಲಿದ್ದಾರೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಅಕೌಂಟ್ ನಿಂದ ಪ್ಲ್ಯಾನ್ ಮಾಡಿ ಸಿಬ್ಬಂದಿಗಳಿಬ್ಬರು ಸೇರಿ 32 ಲಕ್ಷ ರೂಪಾಯಿ ಕನ್ನ ಹಾಕಿದ್ದಾರೆ.
ಮಾಹಿತಿ ಪ್ರಕಾರ ಈ ಸಂಘದ ಮ್ಯಾನೇಜರ್ ಅಗಿರುವ ನಾರಾಯಣ ಗೌಡರಿಗೆ ಗೋಲ್ಮಾಲ್ ಅಗಿರುವ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ವರ್ಷದ ಲೆಕ್ಕ ಪತ್ರ ಪರಿಶೋಧನೆ ವೇಳೆ ಅಧ್ಯಕ್ಷ ಪದ್ಮ ಗೌಡರಿಗೆ ಗೋಲ್ಮಾಲ್ ಪ್ರಕರಣ ಬೆಳಕಿಗೆ ಬಂದಿದ್ದು ಆಂತರಿಕ ತನಿಖೆ ನಡೆಸಿದಾಗ ಸಂಘದ ಸಿಬ್ಬಂದಿಗಳಾದ ಪ್ರಶಾಂತ್ ಗೌಡ ಮತ್ತು ಸದಾಶಿವ @ ಸುಜಿತ್ ಕೋಟ್ಯಾನ್ ಇಬ್ಬರು ಸೇರಿಕೊಂಡು ಗೋಲ್ಮಾಲ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಬಗ್ಗೆ ಸಂಘದ ಅಧ್ಯಕ್ಷರಾದ ಪದ್ಮಗೌಡ ಅವರನ್ನು ಏ.22 ರಂದು ಮಾಧ್ಯಮದವರು ಕರೆ ಮಾಡಿ ಸಂಪರ್ಕಿಸಿ ಮಾಹಿತಿ ಪಡೆದಾಗ ಕೋಟ್ಯಾಂತರ ರೂಪಾಯಿ ಗೋಲ್ಮಾಲ್ ಅಗಿಲ್ಲ ಕೇವಲ 32 ಲಕ್ಷ ರೂಪಾಯಿ ಗೋಲ್ಮಾಲ್ ಅಗಿರುವುದು ಮಾರ್ಚ್ ತಿಂಗಳ ಲೆಕ್ಕ ಪತ್ರ ಪರಿಶೋಧನೆ ವೇಳೆ ಗೊತ್ತಾಗಿದೆ. ಇದನ್ನು ಸಿಬ್ಬಂದಿಗಳಿಬ್ಬರು ಒಪ್ಪಿಕೊಂಡಿದ್ದು ಇದರಲ್ಲಿ 50% ಹಣ ವಾಪಸ್ ನೀಡಿದ್ದಾರೆ ಉಳಿದ ಹಣವನ್ನು ಕೆಲವು ದಿನಗಳಲ್ಲಿ ವಾಪಸ್ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.