ಬಂಟ್ವಾಳ; ಪೋಷಕರೇ ನಿಮ್ಮ ಮಕ್ಕಳು ಜೋಕಾಲಿಯಲ್ಲಿ ಆಡುತ್ತಿದ್ದರೆ ದಯವಿಟ್ಟು ಆದಷ್ಟು ಜೋಕಾಲಿಯಿಂದ ಮಕ್ಕಳನ್ನು ದೂರವಿರಿಸಿ. ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಜೋಕಾಲಿ ಬಾಲಕಿಯೊಬ್ಬಳ ಜೀವ ಕಸಿದಿದೆ. ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ 3ನೇ ತರಗತಿ ವಿದ್ಯಾರ್ಥಿ ತೀರ್ಥಶ್ರೀ ಮೃತ ಬಾಲಕಿ.
ತೀರ್ಥಶ್ರೀ ಜೋಕಾಲಿಯಲ್ಲಿ ಆಟ ಆಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಕ್ಕಿಕೊಂಡು ಸಾವನ್ನಪ್ಪಿದ್ದಾಳೆ. ಭಾನುವಾರ (ಡಿ.8) ಸಂಜೆ ಘಟನೆ ನಡೆದಿದೆ. ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ತೀರ್ಥಶ್ರೀ ಶೇರಾ ಶಾಲೆಯಲ್ಲಿ ಓದುತ್ತಿದ್ದಳು. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಜೋಕಾಲಿಯಿಂದಾಗಿ ಇಂತಹ ಅನಾಹುತಗಳು ಪದೇ ಪದೇ ನಡೆಯುತ್ತಿದ್ದು ಪೋಷಕರು ವಹಿಸುವ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಮನೆಗಳಲ್ಲಿ ಸೀರೆ, ಹಗ್ಗದಿಂದ ಜೋಕಾಲಿ ಕಟ್ಟಿ ಆಡಲು ಮಕ್ಕಳಿಗೆ ಅವಕಾಶ ನೀಡದೇ ಇರೋದರಿಂದ ಇಂತಹ ಅನಾಹುತ ತಪ್ಪಿಸಬಹುದು.


