ಬಂಟ್ವಾಳ: ಜೀಪಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸಹಿತ ವಶಕ್ಕೆ ಪಡೆದ ಘಟನೆ ಶುಕ್ರವಾರ ಕಲ್ಲಡ್ಕ ಸಮೀಪದ ನರಹರಿ ಪರ್ವತ ಬಳಿ ನಡೆದಿದೆ.
ಕಬಕ ಗ್ರಾಮದ ಪರನೀರುಕಟ್ಟೆ ನಿವಾಸಿ ಮಹಮ್ಮದ್ ರಫೀಕ್(44) ಹಾಗೂ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ತಾರಾನಾಥ ಪೂಜಾರಿ (27) ಬಂಧಿತರು. ಬಂಧಿತರಿಂದ ಒಟ್ಟು 5,500 ರೂ. ಮೌಲ್ಯದ 355 ಗ್ರಾಂ. ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಅವರ ಅನುಮತಿಯೊಂದಿಗೆ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಅವರ ಮಾಹಿತಿಯಂತೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್ಐ ಕಲೈಮಾರ್ಪಿ. ಅವರ ನೇತೃತ್ವದ ತಂಡ ನರಹರಿ ಪರ್ವತದ ಬಳಿ ಶುಕ್ರವಾರ ಜೀಪೊಂದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರಲ್ಲಿದ್ದ ಇಬ್ಬರು ಆರೋಪಿಗಳು ಓಡಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆ ಬಳಿಕ ಆರೋಪಿಗಳನ್ನು ವಿಚಾರಿಸಿ ತನಿಖೆಗೆ ಒಳಪಡಿಸಿದಾಗ ಒಟ್ಟು 355 ಗ್ರಾಂ. ಗಾಂಜಾದ ಕಟ್ಟುಗಳು ಪತ್ತೆಯಾಗಿದೆ. ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.