ಬೆಳ್ತಂಗಡಿ : ಕಳೆದ ಕೆಲವು ವಾರಗಳ ಹಿಂದೆ ಬೆಳ್ತಂಗಡಿಯ ಗಡಾಯಿಕಲ್ಲಿನಲ್ಲಿ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಪ್ರವಾಸಿಗರಿಗೆ ಟಿಕೆಟ್ ನೀಡದೆ ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಮಾಹಿತಿ ತಿಳಿದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳಕ್ಕಾಗಮಿಸಿ ಸ್ಥಳದಿಂದಲೇ ಕರೆ ಮಾಡಿ ಮೇಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಬಳಿಕ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ
ಆರ್.ಎಫ್ ಒ ಸ್ವಾತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರವಾಸಿಗರಿಂದ ಮಾಹಿತಿ ಪಡೆದು ಇಲ್ಲಿನ ಅವ್ಯವಹಾರ ಹಾಗೂ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನವೆಂಬರ್ 21ರಂದು ‘ಗಡಾಯಿಕಲ್ಲಿನಲ್ಲಿ ಹಗಲು ದರೋಡೆ’
-‘ಬೇಲಿಯೇ ಎದ್ದು ಹೊಲ ಮೇಯುತ್ತಿರುವ ವನ್ಯಜೀವಿ ಇಲಾಖೆ’ ಎಂಬ ಶೀರ್ಷಿಕೆಯಲ್ಲಿ ವರದಿ ಬಿತ್ತರಿಸಿತ್ತು. ಇದೀಗ ಎಚ್ಚೆತ್ತ ಹಿರಿಯ ಅಧಿಕಾರಿಗಳು ಅವ್ಯವಸ್ಥೆಯನ್ನು ಸರಿಪಡಿಸಿ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಇದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಫಲಶೃತಿಯಾಗಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲಿಗೆ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿನ ಬಂದ ವರದಿ ನೋಡಿ ವನ್ಯಜೀವಿ ಕಾರ್ಕಳ ವಿಭಾಗದ ಡಿಎಫ್ಓ , ಎಸಿಎಫ್ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ ಗಡಾಯಿಕಲ್ಲಿನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬಹುದು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಗಡಾಯಿಕಲ್ಲಿನ ಮೂರು ಕಡೆಗಳಲ್ಲಿ ಸಿಸಿಟಿವಿ ಅಳವಡಿಸಿದೆ. ಜೊತೆಗೆ ಟಿಕೆಟ್ ಹಣದಲ್ಲಿ ನಡೆಯುತ್ತಿದ್ದ ಅವ್ಯವಹಾರಕ್ಕೆಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು ಕುದುರೆಮುಖ ನ್ಯಾಷನಲ್ ಪಾರ್ಕ್ ಡಾಟ್ ಇನ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಬುಕ್ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ಮಹಿಳೆಯರಿಗೆ ಶೌಚಾಲಯ ಅವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದ್ದು ಮುಂದಿನ ದಿನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ.ಅದಲ್ಲದೆ ಇನ್ನೂ ಮುಂದೆ ಗಡಾಯಿಕಲ್ಲಿಗೆ ಬರುವ ಪ್ರವಾಸಿಗರೆಲ್ಲರ ಸರಿಯಾದ ದಾಖಲೆಗಳನ್ನು ಪಡೆದುಕೊಂಡು ನಂತರ ಮೇಲೆ ಹೋಗಲು ಅವಕಾಶ ನೀಡಲಾಗುವುದು ಸುತ್ತಮುತ್ತಲಿನಲ್ಲಿ ವಾತಾವರಣವನ್ನು ವನ್ಯಜೀವಿ ಅಧಿಕಾರಿಗಳು ಮತ್ತು ಸಿಸಿಕ್ಯಾಮರಗಳು ನಿಗಾ ಇಡಲಾಗುತ್ತದೆ ಅದಲ್ಲದೆ ನಾವು ಕೂಡ ಅನ್ ಲೈನ್ ಮೂಲಕ ಮೊಬೈಲ್ ನಲ್ಲಿ ಇಲ್ಲಿನ ಸ್ಥಿತಿಗಳ ಬಗ್ಗೆ ಆಗಾಗ ಪರಿಶೀಲನೆ ನಡೆಸುತ್ತಿರುತ್ತೇವೆ ಎಂದು ವನ್ಯಜೀವಿ ಕಾರ್ಕಳ ವಿಭಾಗದ ಡಿಎಫ್ಓ ಗಣಪತಿ ಹೇಳಿದ್ದಾರೆ. ಇನ್ನೂ ಈ ಸ್ಥಳದಲ್ಲಿ ಯಾವೆಲ್ಲಾ ಬದಲಾವಣೆ ಮತ್ತು ಅಭಿವೃದ್ಧಿಗಳನ್ನು ಮಾಡಬಹುದು ಎಂಬುವುದರ ಬಗ್ಗೆ ಬೆಳ್ತಂಗಡಿ ವಲಯ ಆರ್.ಎಫ್.ಓ ಸ್ವಾತಿರವರು ಮಾಹಿತಿ ನೀಡಿದ್ದಾರೆ.
ಗಡಾಯಿಕಲ್ಲು ಭೇಟಿ ವೇಳೆ ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್ಓ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಎಸಿಎಫ್ ಖಜಾಲ್ ಪಾಟೀಲ್,ಬೆಳ್ತಂಗಡಿ ವನ್ಯಜೀವಿ ವಲಯ ಆರ್.ಎಫ್.ಓ ಸ್ವಾತಿ ,ಫಾರೆಸ್ಟರ್ ಕಿರಣ್ ಪಾಟೀಲ್ , ಅರಣ್ಯ ವೀಕ್ಷಕ ಸುರೇಶ್ , ಅರಣ್ಯ ರಕ್ಷಕ ರಾಘವೇಂದ್ರ , ಹರೀಶ್ , ಉಮೇಶ್ ಜೊತೆಯಲ್ಲಿದ್ದರು