ಮಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಕ್ಫ್ ವಿಚಾರದ ಬಗ್ಗೆ, ವಕ್ಫ್ ಮಂಡಳಿಯ ನಡೆಯನ್ನು ಖಂಡಿಸಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಇದೇ 22ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಪುರಭವನದ ಎದುರಿನ ಮಹಾತ್ಮ ಗಾಂಧೀಜಿ ಪ್ರತಿಮೆಯ ಬಳಿ ‘ನಮ್ಮ ಭೂಮಿ– ನಮ್ಮ ಹಕ್ಕು’ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾತನಾಡಿ,‘ಮಂಗಳೂರಿನಲ್ಲಿ ವಕ್ಫ್ ಮಂಡಳಿಗೆ ಇದುವರೆಗೂ ಕಂದಾಯ ಇಲಾಖೆಯ 30 ಎಕರೆಗಳಷ್ಟು ಜಮೀನನ್ನು ವರ್ಗಾಯಿಸಲಾಗಿದೆ. ಆದರೆ ವರ್ಗಯಿಸಲಾದ ಜಮೀನನ್ನು ಮಂಡಳಿಯು ದೂರುಪಯೋಗ ಪಡಿಸಿಕೊಂಡಿರುವ ಆರೋಪದ ಕುರಿತು ಪರಿಶೀಲಿಸಲು ಪಕ್ಷದ ಮುಖಂಡ ಮೋನಪ್ಪ ಭಂಡಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಅನೇಕ ವಕೀಲರೂ ಸಮಿತಿಯಲ್ಲಿದ್ದಾರೆ. ಯಾವ ಅವಧಿಯಲ್ಲಿ ಈ ಹಸ್ತಾಂತರ ನಡೆದಿದೆ ಎಂಬುದನ್ನು ಸಮಿತಿಯು ಪರಿಶೀಲನೆ ನಡೆಸುತ್ತಿದೆ,’ ಎಂದರು.
ವಕ್ಫ್ ಮಂಡಳಿಯ ಕುರಿತು ಜನರು ಜಾಗೃತರಾಗಬೇಕು. ತಮ್ಮ ಪಹಣಿಯನಲ್ಲಿ ವಕ್ಫ್ ಮಂಡಳಿಯ ಹೆಸರು ಇದೆಯೇ ಎಂದು ಪರಿಶೀಲಿಸುವಂತೆ ರೈತರು, ಮಠಗಳು, ದೇವಸ್ಥಾನಗಳು, ಭಜನಾ ಮಂದಿರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಪ್ರತಿಭಟನೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯರು, ಹಿಂದೂ ಸ್ಮಶಾನಗಳ ಸಮಿತಿ ಸದಸ್ಯರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸಂಗೀತಾ ಆರ್.ನಾಯಕ್, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ರಾವ್ ಮತ್ತಿತರರು ಉಪಸ್ಥಿತರಿದ್ದರು.