ಉಡುಪಿ: ಚಿನ್ನಾಭರಣ ಖರೀದಿಸಿ ಹಣ ಪಾವತಿಸಿದೇ ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಸಮೀಪ ಜುವೆಲ್ಲರ್ಸ್ ನಲ್ಲಿ ನಡೆದಿದೆ. ಶಿರ್ವದ ನ್ಯೂ ಭಾರ್ಗವಿ ಜುವೆಲ್ಲರ್ಸ್ ಮಾಲೀಕ ಗಣೇಶ್ ಎಂಬವರಿಗೆ ಫರೀದಾ ಹಾಗೂ ಅಪ್ಸಲ್ ಎಂಬ ಆರೋಪಿಗಳು ವಂಚಿಸಿದ್ದಾರೆ.
ಗಣೇಶ್ ಅವರು ಶಿರ್ವ ಪೇಟೆಯ ಬಳಿ “ ನ್ಯೂ ಭಾರ್ಗವಿ ಜುವೆಲ್ಲರ್ಸ್ ” ಎಂಬ ಹೆಸರಿನ ಚಿನ್ನಾಭರಣಗಳ ಮಳಿಗೆಯನ್ನು ನಡೆಸಿಕೊಂಡು ಬರುತ್ತಿದ್ದು, ದಿನಾಂಕ 08/03/2025 ರಿಂದ 11/03/2025 ರ ದಿನಗಳಂದು ಆರೋಪಿ ಫರೀದಾ ಎಂಬಾಕೆಯು ಗಣೇಶ್ ಅವರಿಗೆ ಫೋನ್ ಕರೆ ಮಾಡಿ ನಂಬಿಸಿ ಆರೋಪಿ ಅಪ್ಸಲ್ ಮತ್ತು ಇತರ ಇಬ್ಬರು ಸಂಬಂಧಿಕರ ಮುಖಾಂತರ ಗಣೇಶ್ ಅವರ ಅಂಗಡಿಯಿಂದ 1,78,000/- ಮೊತ್ತದ 69.165 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚಿಸಿದ್ದಾರೆ. ಅಲ್ಲದೇ ಆರೋಪಿ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಕೃಪಾ ಜುವೆಲ್ಲರ್ಸ್ ನ ಅನುಷ್ ರವರಿಗೂ ಫೋನ್ ಕರೆ ಮಾಡಿ, ಅವರನ್ನು ನಂಬಿಸಿ ದಿನಾಂಕ 16/03/2025 ರಂದು ಒಟ್ಟು 10.740 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿ, ಆರೋಪಿ ಅಪ್ಸಲ್ ಮುಖಾಂತರ ಮಂಗಳೂರಿನಲ್ಲಿ ಪಡೆದುಕೊಂಡು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚಿಸಿದ್ದಾಳೆ. 2 ಪ್ರಕರಣಗಳು ಅಲ್ಲದೇ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಪುಷ್ಪಾ ಜುವೆಲ್ಲರ್ಸ್ ನ ಶ್ರೀಹರ್ಷರವರಿಗೂ ಫೋನ್ ಕರೆ ಮಾಡಿ, ಅವರನ್ನು ನಂಬಿಸಿ ದಿನಾಂಕ 09/04/2025 ಒಟ್ಟು 18.660 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚಿಸಿದ್ದಾಳೆ ಎಂದು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.