ಮಂಗಳೂರು; ರೌಡಿ ಶೀಟರ್ ಸಮೀರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿದೆ.
ಮೊನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ರೌಡಿ ಶೀಟರ್ ಮುಕ್ಕಚ್ಚೇರಿಯ ಸಮೀರ್ ಯಾನೆ ಕಡಪ್ಪರ ಸಮೀರ್ (33) ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ಮಾರಾಕಾಸ್ತ್ರ ಕೊಚ್ಚಿ ಆತನ ಕುಟುಂಬಸ್ಥರ ಮುಂದೆಯೇ ಕೊಲೆ ಮಾಡಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.
ಸಮೀರ್ ಮುಕ್ಕಚ್ಚೇರಿಯಿಂದ ಗೋರಿಗುಡ್ಡೆಯಲ್ಲಿರುವ ತನ್ನ ಸಹೋದರನ ಮನೆಗೆ ತಾಯಿ ಮತ್ತು ಪತ್ನಿ ಸಹಿತ ಇತರ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದಾಗ ದಾರಿಮಧ್ಯೆ ಊಟಕ್ಕೆ ಕಲ್ಲಾಪಿನ ರೆಸ್ಟೊರೆಂಟ್ ಬಳಿ ಬರುವಂತೆ ಯಾರೋ ಆತನಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.ಅದರಂತೆ ರೆಸ್ಟೊರೆಂಟ್ ಬಳಿ ಕಾರ್ನಿಂದ ಇಳಿಯುತ್ತಿದ್ದಂತೆಯೇ ಅಲ್ಲಿ ಮೊದಲೇ ಸಿದ್ಧರಾಗಿ ನಿಂತಿದ್ದ ತಂಡ ಸಮೀರ್ನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಅರಿತ ಸಮೀರ್ ತಪ್ಪಿಸಿಕೊಳ್ಳಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬೆನ್ನಟ್ಟಿಕೊಂಡು ಹೋದ ತಂಡವು ಸಮೀರ್ನನ್ನು ತಲವಾರಿನಿಂದ ಕೊಂದು ಪರಾರಿಯಾಗಿದೆ .
ಇನ್ನು ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ರಚಿಸಲಾಗಿದೆ. ವಿಚಾರಣೆಗಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.