ಕಾರವಾರ: ಮನೆಯಲ್ಲಿ ಜಿಂಕೆ ಮಾಂಸ ಇದೆ ಎಂದು ಪರಿಶೀಲನೆ ಮಾಡಲು ಬಂದ ಅಧಿಕಾರಿಗಳು ಮನೆಯಲ್ಲೆ ಲಾಕ್ ಆದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮುಂಡಗೋಡ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ಮನೆಯಲ್ಲಿ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ಕೂಡಿ ಹಾಕಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯ ಪರಶುರಾಮ ಕಬ್ಬೇರ ಎಂಬುವವರ ಮನೆಯಲ್ಲಿ ಅಧಿಕಾರಿಗಳು ಲಾಕ್ ಮಾಡಲ್ಪಟ್ಟಿದ್ದು, ಜಿಂಕೆ ಮಾಂಸ ಮನೆಯಲ್ಲಿದೆ ಎಂಬ ಮಾಹಿತಿ ಮೇರೆಗೆ ಪರಶುರಾಮ ಮನೆ ಮೇಲೆ ದಾಳಿ ಮಾಡಲು ಅಧಿಕಾರಿಗಳು ಬಂದಿದ್ದರು.
ಆದರೆ ಮನೆಯಲ್ಲಿ ಯಾವುದೇ ಬೇಟೆಯಾಡಿದ ಮಾಂಸ ಪತ್ತೆಯಾಗದ ಕಾರಣ, ಅಧಿಕಾರಿಗಳ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರು ಸುಳ್ಳು ಮಾಹಿತಿಯಿಂದ ದಾಳಿ ಮಾಡಿದ್ದಿರಿ ಎಂದು ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿದ್ದಾರೆ.
ದಾಳಿ ನೇತೃತ್ವದ ವಹಿಸಿದ್ದ ಆರ್ ಎಫ್ಓ ಸುರೇಶ ಕುಲ್ಲೋಳ್ಳಿ ಸಹಿತ ಅರಣ್ಯ ಸಿಬ್ಬಂದಿಗಳ ಮನೆಯಲ್ಲಿ ಲಾಕ್ ಮಾಡಲ್ಪಟ್ಟಿದ್ದು, ನಂತರ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಗ್ರಾಮದಿಂದ ಹೊರ ಬರುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.