ಕೊಕ್ಕಡ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಶಿಶಿಲೆಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿರುವ ದೇವರ ಮೀನೆಂದೆ ಪ್ರಖ್ಯಾತವಾದ ಪೆರುವೊಳು ಜಾತಿಯ ಮತ್ಸ್ಯಗಳು ಪ್ರವಾಸಿಗರಿಗೆ ಮುದ ನೀಡುತ್ತಿತ್ತು.
ಸಾಮಾನ್ಯವಾಗಿ ಶ್ರೀ ಸಾನಿಧ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರು ಮೀನುಗಳಿಗೆ ಆಹಾರ ಒದಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಲಾಕ್ ಡೌನ್ ಇರುವುದರಿಂದ ಹೊರ ಊರಿನ ಭಕ್ತರಿಗೆ ಅವಕಾಶವಿಲ್ಲದಂತಾಗಿದೆ.
ಶಿಶಿಲ ಕ್ಷೇತ್ರ ತೀರಾ ಹಳ್ಳಿ ಪ್ರದೇಶವಾಗಿರುವುದರಿಂದ ದೇವಾಲಯಕ್ಕೆ ಆದಾಯವೂ ಕಡಿಮೆ. ಇದನ್ನು ಗಮನಿಸಿದ ಊರ ಪರವೂರಿನ ಭಕ್ತರು ದೇವರ ಮೀನಿಗೆ ನಿತ್ಯ ಆಹಾರ ಒದಗಿಸುವಲ್ಲಿ ನಿರತರಾಗಿದ್ದಾರೆ. ದಿನಕ್ಕೆ 2,3 ಮಂದಿಯಂತೆ ಹರಳು, ಅಕ್ಕಿ ಸಮರ್ಪಿಸುತ್ತಿದ್ದಾರೆ. ದೂರದ ಬೆಂಗಳೂರು ಭಕ್ತರೂ ಸ್ಪಂದಿಸುತ್ತಿದ್ದಾರೆ . ಗ್ರಾಮದ ಭಕ್ತಾಧಿಗಳೂ ಅಕ್ಕಿಯನ್ನು ಕಳುಹಿಸಿಕೊಡುತ್ತಿದ್ದಾರೆ. ಅಂತೂ ದೇವರ ಮೀನೆಂದೆ ಖ್ಯಾತಿ ಪಡೆದ ಶಿಶಿಲ ಮತ್ಸ್ಯಗಳಿಗೆ ಭಕ್ತರು ಸ್ಪಂದಿಸುವ ರೀತಿ ಅಭಿನಂದನೀಯ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಶೀನಿವಾಸ ಮೂಡೆತ್ತಾಯ, ಅಭಿವೃದ್ಧಿ ಸಮಿತಿಯ ಅದ್ಯಕ್ಷ ಶ್ರೀ ಆನಂದ ಪೂಜಾರಿ, ಮತ್ಸ್ಯ ಹಿತರಕ್ಷಣಾ ವೇದಿಕೆ ಅದ್ಯಕ್ಷ ಶ್ರೀ ಬಿ.ಜಯರಾಮ ನೆಲ್ಲಿತ್ತಾಯ ಮತ್ತು ಸಮಿತಿಯ ಸದಸ್ಯರು ಸಂತೊಷ ವ್ಯಕ್ತಪಡಿಸಿರುತ್ತಾರೆ.