ಮಂಗಳೂರು: ಮೀನುಗಾರಿಕೆ ಬಂದರಿನಲ್ಲಿ ಮೀನು ಕಟ್ಟಿಂಗ್ ನಡೆಸುವವರು ಮೂಲ ಸೌಕರ್ಯವಿಲ್ಲದೆ ಸಂಕಟ ಎದುರಿಸುತ್ತಿದ್ದಾರೆ. ಆದರೆ ಚಿಲ್ಲರೆ ಮೀನು ವ್ಯಾಪಾರ ಹಾಗೂ ಕಟ್ಟಿಂಗ್ ಮಾಡಲು ಮೀನುಗಾರಿಕೆ ದಕ್ಕೆಯಲ್ಲಿ ಕಾನೂನಿನ ಪ್ರಕಾರ ಅವಕಾಶವಿಲ್ಲ ಎಂಬ ಕಾರಣ ನೀಡಿ ಮೂಲಸೌಲಭ್ಯ ಕಲ್ಪಿಸಲು ಮೀನುಗಾರಿಕೆ ಇಲಾಖೆ ಹಿಂದಡಿ ಇಟ್ಟಿದೆ.
ಮಂಗಳೂರು ದಕ್ಕೆಯಲ್ಲಿ ಚಿಲ್ಲರೆ ಮೀನು ಖರೀದಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮೀನು ಕಟ್ಟಿಂಗ್ ಮಾಡುವ ವ್ಯವಸ್ಥೆ ಈ ಹಿಂದಿನಿಂದಲೂ ಬಳಕೆಯಲ್ಲಿದೆ. ಹೀಗಾಗಿ ಮೀನು ಕಟ್ಟಿಂಗ್ ಅನ್ನೇ ನಂಬಿಕೊಂಡು ಸುಮಾರು 100ಕ್ಕೂ ಅಧಿಕ ಮಂದಿ ಇಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಕುಳಿತುಕೊಳ್ಳಲು ಬೇಕಾದ ಸೂಕ್ತ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗೆ ಒದ್ದೆಯಾಗಿಕೊಂಡೇ ಇಲ್ಲಿ ಮೀನು ಕಟ್ಟಿಂಗ್ ನಡೆಸುವಂತಾಗಿದೆ.
ಇವರು ಜೀವನೋಪಾಯಕ್ಕಾಗಿ ಹಲವಾರು ವರ್ಷಗಳಿಂದ ಮೀನು ಕತ್ತರಿಸುವ ಕೆಲಸ ಮಾಡುತ್ತಿದ್ದಾರೆ. ಸುಮಾರು 70ಕ್ಕೂ ಅಧಿಕ ಜನರು ನಿತ್ಯ ಇಲ್ಲಿ ಮೀನು ಕತ್ತರಿಸುವ ಕೆಲಸ ಮಾಡುತ್ತಾರೆ.