ಮಂಗಳೂರು; ಮನೆಯವರು ಮೆಹಂದಿಗೆ ತೆರಳಿದ್ದಾಗ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಮನೆ ಸುಟ್ಟ ಕರಕಲಾದ ಘಟನೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲ ವೈದ್ಯನಾಥನಗರದಲ್ಲಿ ನಡೆದಿದೆ.
ಬಗಂಬಿಲ ವೈದ್ಯನಾಥನಗರ ನಿವಾಸಿ ಸುಶೀಲ ಮಡಿವಾಳಿ ಎಂಬುವರ ಮನೆಯಲ್ಲಿ ಅನಾಹುತ ನಡೆದಿದೆ. ಘಟನೆ ಸಂದರ್ಭ ಸುಶೀಲಾ ಸೇರಿದಂತೆ ಅವರ ಪುತ್ರಿ ಅಶಾ, ಪತಿ ಜನಾರ್ದನ, ಸುಶಿಲಾ ಸಹೋದರಿ ಮೀರಾ ಅವರು ಮನೆ ಸಮೀಪದ ಸಂಬಂಧಿಕರ ಮೆಹೆಂದಿ ಕಾರ್ಯಕ್ರಮಕೆ ತೆರಳಿದ್ದರು.
ಅಲ್ಲಿಂದ ವಾಪಸಾಗುವಾಗ ಸುಶೀಲಾ ಅವರು ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಮನೆಯೊಳಗೆ ಬೆಂಕಿ ಗೋಚರಿಸಿದೆ. ತಕ್ಷಣವೇ ಮಹೆಂದಿಯಲ್ಲಿ ಭಾಗವಹಿಸಿದ್ದವರನ್ನು ಕರೆದಿದ್ದು, ಸ್ಥಳೀಯರು ಸೇರಿ ಮನೆಯೊಳಗೆ ಇದ್ದ ಗ್ಯಾಸ್ ಸಿಲಿಂಡರನ್ನು ಹೊರಗೆ ಎಸೆದಿದ್ದಾರೆ. ನಂತರ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅದಾಗಲೇ ಮನೆಯೊಳಗೆ ಇದ್ದ ಗ್ರೇಂಡರ್, ಪ್ರಿಡ್ಜ್, ಟಿ.ವಿ, ಫ್ಯಾನ್, ಬಟ್ಟೆ, ಕಪಾಟು ಸುಟ್ಟುಕರಕಲಾಗಿದ್ದವು. ಇಡೀ ಕುಟುಂಬ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಇದರೊಂದಿಗೆ ಮನೆ ಸುಟ್ಟು ಕರಕಲಾಗಿದ್ದು ಇಡೀ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.