ಬೆಳ್ತಂಗಡಿ : ಕಳೆದ ಹತ್ತು ವರ್ಷಗಳಿಂದ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಶಾರದಾ ಮಂಟಪದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಾಬು(70) ಎಂಬವರು ಕಳೆದ ವಾರ ಸಾವನ್ನಪ್ಪಿದ್ದು, ಬದುಕು ಕಟ್ಟೋಣ ಬನ್ನಿ ತಂಡ ಹಿಂದೂ ಸಂಪ್ರದಾಯದಂತೆ ದಫನ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಮಂಗಳೂರಿನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಬಾಬು ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲ್ಲಿಲ್ಲ. ಹೀಗಾಗಿ ಸಾವನ್ನಪ್ಪಿದ ವ್ಯಕ್ತಿಯ ಅಂಗಿಯಲ್ಲಿದ್ದ ಉಜಿರೆಯ ಟೈಲರ್ ಟ್ಯಾಗ್ ಮೂಲಕ ಉಜಿರೆ ನಿವಾಸಿ ಇರಬಹುದು ಎಂದು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮೂಲಕ ಬಜಪೆ ಪೋಲೀಸರು ಗುರುತು ಪತ್ತೆಗೆ ಮಾನವಿ ಮಾಡಿದ್ದರು.

ಅದರಂತೆ ಬಾಬು ಅವರಿಗೆ ಯಾರು ಕುಟುಂಬಸ್ಥರು ಇಲ್ಲ ಅವರು ಅನಾಥ ಎಂದು ಪೊಲೀಸರಿಗೆ ಉಜಿರೆಯಿಂದ ಮಾಹಿತಿ ಕೊಟ್ಟಿದ್ದರು. ಕೊನೆಗೆ ಅನಾಥವಾಗಿರುವ ಬಾಬು ಬಗ್ಗೆ ಕಾಳಜಿ ಇಟ್ಟು ಉಜಿರೆಯ ಉದ್ಯಮಿ ಲಕ್ಷ್ಮಣ್ ಸಪಲ್ಯ ಇವರು ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಿಗೆ ಮಾಹಿತಿ ನೀಡಿದ್ದು, ನಂತರ ಇವರಿಗೆ ಹಿಂದೂ ಸಂಪ್ರದಾಯದಂತೆ ದಫನ ಮಾಡಲು ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಿ ಅದಕ್ಕೆ ಅಗುವ ಖರ್ಚುಗಳನ್ನು ಭರಿಸುವುದಾಗಿ ಭರವಸೆ ನೀಡಿದ್ದರು.
ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ಉದ್ಯಮಿ ಹಾಗೂ ಬದುಕು ಕಟ್ಟೋಣ ಬನ್ನಿ ತಂಡದ ಗೌರವ ಸಲಹೆಗಾರರಾದ ಲಕ್ಷ್ಮಣ್ ಸಪಲ್ಯ ಅವರ ಮಾರ್ಗದರ್ಶನದಲ್ಲಿ ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಶ್ರೀಧರ್.ಎಮ್.ಕಲ್ಮಂಜ ,ವಿ.ರಾಘವೇಂದ್ರ ಉಂಕ್ರೋಟ್ಟು, ಸಂತೋಷ್ ಕೊಳಂಬೆ , ಮುಖೇಶ್ ಗೌಡ ಕಲ್ಮಂಜ, ಹರೀಶ್ ದೇವಾಡಿಗ ಕಲ್ಮಂಜ ,ಪ್ರತೀಕ್ ಕೋಟ್ಯಾನ್ ಹಾಗೂ ಪ್ರಶಾಂತ್ ಉಜಿರೆ,ಚರಣ್ ಮತ್ತಿತರರು ಇಂದು ಬೆಳಗ್ಗೆ ಹೋಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿಕೊಂಡು ನಂತರ ಉಜಿರೆ ಎಸ್.ಡಿ.ಎಮ್ ಮುಕ್ತಿ ವಾಹನದ ಮೂಲಕ ಸಂಜೆ ಉಜಿರೆಯ ಹಳೆಪೇಟೆಯಲ್ಲಿರುವ ರುದ್ರ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ದಫನ ಮಾಡಲು ಸಹಕರಿಸಿದರು.
ಇನ್ನೂ ಅನಾಥವಾಗಿದ್ದ ಬಾಬು ಅವರ ತಿಥಿ ಕಾರ್ಯಕ್ರಮ ಹಿಂದೂ ಸಂಪ್ರದಾಯದಂತೆ ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ನಡೆಯಲಿದೆ.