ಮಂಗಳೂರು : ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಮನೆ ಮಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೊಂಡಂತಿಲ ಗ್ರಾಮದ ಬಿತ್ತ್ಪಾದೆ ಎಂಬಲ್ಲಿ ನಡೆದಿದೆ. ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ತಂಡವೊಂದು ಹಲ್ಲೆ ನಡೆಸಿದೆ. ಅಡ್ಯಾರ್ ಕಣ್ಣೂರು ನಿವಾಸಿಗಳಾದ ಸಿನಾನ್, ಸಿಯಾನ್, ರಫೀಝ್ ಹಲ್ಲೆಗೈದ ಆರೋಪಿಗಳು.
ಮಕ್ಕಳು ಅಂಗಳದಲ್ಲಿ ಸೈಕಲ್ನಲ್ಲಿ ಆಟವಾಡುವ ವಿಚಾರದಲ್ಲಿ ಸಾಹಿದಾ ಮತ್ತವರ ಪತಿ ನವಾಝ್ ಮತ್ತು ಮನೆ ಸಮೀಪದ ನಫಿಯಾರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಸಾಹಿದಾರ ಮನೆಗೆ ನಫಿಯಾರ ಸಂಬಂಧಿಕರಾದ ಅಡ್ಯಾರ್ ಕಣ್ಣೂರು ನಿವಾಸಿಗಳಾದ ಸಿನಾನ್, ಸಿಯಾನ್, ರಫೀಝ್ ಅಕ್ರಮವಾಗಿ ಪ್ರವೇಶಿಸಿ ಸಾಹಿದಾರ ಗಂಡ ನವಾಝ್ಗೆ ಹಲ್ಲೆಗೈದಿದ್ದು, ಈ ಸಂದರ್ಭ ಗಂಡನಿಗೆ ಯಾಕೆ ಹೊಡೆಯುತ್ತೀರಿ ಎಂದು ಕೇಳಿ ಸಾಹಿದಾ ಅಡ್ಡ ಬಂದಾಗ ಆರೋಪಿಗಳು ಆಕೆಗೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ನವಾಝ್ರ ಅಕ್ಕ ಝುಬೈದಾ ಆಕ್ಷೇಪ ವ್ಯಕ್ತಪಡಿಸಿ ಅಲ್ಲಿಗೆ ಬಂದಿದ್ದು, ಆರೋಪಿಗಳು ಅವರನ್ನೂ ಎಳೆದಾಡಿ ಹೊಡೆದಿದ್ದಾರೆ ಎನ್ನಲಾಗಿದೆ. ಗಲಾಟೆಯ ಬೊಬ್ಬೆ ಕೇಳಿ ನೆರೆಹೊರೆಯವರು ಆತಂಕದಿಂದ ಓಡಿ ಬಂದಿದ್ದು, ಅವರಿಗೂ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಮಂಗಳೂರು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.