ಮಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಹಳೆಯಂಗಡಿಯ ಕಲ್ಲಾಪು ಬಳಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ವಿನೋದ್ ಸಾಲಿಯಾನ್(38), ಪತ್ನಿ ರಚನಾ(38), ಮಗು ಸಾಧ್ಯ ಸಾಲಿಯಾನ್(10) ಮೃತಪಟ್ಟವರೆಂದು ಹೇಳಲಾಗಿದೆ.
ಕಳೆದ ಎರಡು ದಿನಗಳಿಂದ ಮನೆಯಿಂದ ಯಾರು ಹೊರಬಾರದ ಹಿನ್ನಲೆ ನೆರೆಹೊರೆಯವರು ಮನೆಯ ಕಿಟಕಿಯಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ವಿನೋದ್ ಸಾಲ್ಯಾನ್ ಮುಂಬೈಯಲ್ಲಿ ಟಾಟಾ ಹೌಸಿಂಗ್ ನಲ್ಲಿ ಕೆಲಸಕ್ಕಿದ್ದು ಕಳೆದ ಒಂದು ವರ್ಷದ ಹಿಂದೆ ಹಳೆಯಂಗಡಿ ಸಮೀಪದ ಪಡು ಪಣಂಬೂರಿನ ಬೆಳ್ಳಾಯರು ಕಲ್ಲಾಪು ಬಳಿ ಇಂದಿರಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಡುಪಣಂಬೂರು ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಲಗಿದ್ದ ಸ್ಥಿತಿಯಲ್ಲಿಯೇ ಚಾಪೆ ಮೇಲೆ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ವಿಷದ ಬಾಟಲಿಯೂ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.