ಬೆಳ್ತಂಗಡಿ : ಧರ್ಮಸ್ಥಳ ಸಮೀಪದ ಪಾಂಗಳ ಬಳಿ ಸ್ಕೂಟರ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜೂ.5 ರಂದು ಕುಂದಾಪುರ ಮೂಲದ ನಾರಾಯಣ ಮಡಿವಾಳ ಎಂಬ ಹೆಸರಿನವರು ಸಾವನ್ನಪ್ಪಿದ್ದಾರೆ. ಮಾಹಿತಿ ಸಿಕ್ಕಿದ ತಕ್ಷಣ ಇವರ ಕುಟುಂಬಸ್ಥರು ಧರ್ಮಸ್ಥಳ ಪೊಲೀಸರನ್ನು ಸಂಪರ್ಕಿಸಲು ಸ್ಥಳೀಯರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ ಎಂದು ಬೇರೆಡೆ ನಡೆದ ಅಪಘಾತವೊಂದರ ಫೋಟೋಗಳು ಸಹಿತ ವರದಿಯನ್ನು ಬೆಳ್ತಂಗಡಿ ಲೋಕಲ್ ವಾರ ಪತ್ರಿಕೆ ಸುದ್ದಿ ಬಿಡುಗಡೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಈ ಬಗ್ಗೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿ ಮಾಹಿತಿ ಕಲೆ ಹಾಕಿದಾಗ ಕೊನೆಗೆ ಈ ಅಪಘಾತ ನಡೆದ ಬಗ್ಗೆ ವರದಿಯಾಗಿಲ್ಲ ಹಾಗೂ ಸುಳ್ಳು ವರದಿ ಪ್ರಕಟ ಮಾಡಲಾಗಿದೆ ಎಂದು ಗೊತ್ತಾಗಿದೆ. ಹಾಗಾಗಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಈ ಘಟನೆ ಇಂದು ನಡೆದಿಲ್ಲ ಎಂದು ಧರ್ಮಸ್ಥಳ ಪೊಲೀಸರು ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಸುಳ್ಳು ಸುದ್ದಿ ಎಂದು ತಿಳಿಸಿದ ಬಳಿಕ ಸುದ್ದಿ ಬಿಡುಗಡೆಯ ವೆಬ್ ಸೈಟ್ ನಲ್ಲಿ ವರದಿ ಪ್ರಸಾರ ಮಾಡಿದ ಲಿಂಕ್ ಡಿಲೀಟ್ ಮಾಡಿದ್ದಾರೆ.