ಬೆಳ್ತಂಗಡಿ : ಕೊಯ್ಯರಿನ ವ್ಯಕ್ತಿಯೋರ್ವನು ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ ತೋರಿಸಿ, ಜಾಗೃತ ದಳದ ಅಧಿಕಾರಿ ಎಂದು ಓಡಾಡುತ್ತಿದ್ದ. ಈ ಪ್ರಕರಣವಾಗಿ ಬೆಳ್ತಂಗಡಿ ಮೆಸ್ಕಾಂ ಜೆ.ಇ.ಯವರು ಬೆಳ್ತಂಗಡಿ ಪೋಲಿಸ್ ಠಾಣೆಗೆ ಹಾಗೂ ಮಂಗಳೂರು ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳಿಗೆ ಅ.1ರಂದು ದೂರು ನೀಡಿದ್ದರು.
ಇಲ್ಲಿಯ ಪಾಂಬೇಲು ನಿವಾಸಿ ಹರೀಶ್ ಯಾನೆ ಲೋಕೇಶ್ ಗೌಡ ಎಂಬವರ ಮೇಲೆ ದೂರನ್ನು ನೀಡಲಾಗಿದೆ. ಮಂಗಳೂರು ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ ತೋರಿಸಿ, ಜಾಗೃತ ದಳದ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಈತ ಇತ್ತೀಚೆಗೆ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ವಿದ್ಯುತ್ ಹೊಂದಿರುವುದಾಗಿ ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯನ್ವಯ ಮೆಸ್ಕಾಂ ಜೆ.ಇ.ಯವರು ನೀಡಿದ ದೂರನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಆ ಕೂಡಲೇ ಕಾರ್ಯ ಪ್ರವೃತರಾದ ಪೊಲೀಸರು ಹರೀಶ್ ಯಾನೆ ಲೋಕೇಶ್ ಗೌಡ ರವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಈತ ನಕಲಿ ಮೆಸ್ಕಾಂ ಅಧಿಕಾರಿ ಎಂದು ತಿಳಿದುಬಂದಿದೆ. ಪೊಲೀಸರು ಆತನಿಗೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಆತನಿಂದ ಮುಚ್ಚಳಿಕೆ ಪತ್ರ ಬರೆಯಿಸಿ ಕಳುಹಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.